Oct 30, 2010

"ಕನ್ನಡದ ಹೂಬಾಣ"

[2008 ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ದೊರಕಿದಾಗ, ನಾನು ಇಂಜಿನಿಯರಿಂಗ್ ಓದುತ್ತಿದ್ದ ಕಾಲೇಜಿನ ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಕೆಲವು ಸಾಲುಗಳನ್ನ ಬರೆದಿದ್ದೆ. ಈಗ ಅದನ್ನ ನಿಮ್ಮ ಮುಂದಿಡುತ್ತಿದ್ದೇನೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭಾಷಯಗಳು, ಸದಾ ನಗುವಿರಲಿ ]

ದಶಕಗಳ ಪರಿಶ್ರಮದಿಂದ
ದೊರಕಿದೆ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ

ಈ ನೀರು,ಭೂಮಿ
ಗಾಳಿ, ಆಕಾಶ ನಮ್ಮದೇ
ಕನ್ನಡಮ್ಮ ನಿನಗೆ ತುಂಬು ಹೃದಯದಿಂದ ನಮನ.

ಕಾಪಾಡಿಕೊಳ್ಳಬೇಕಿದೆ
ನಮ್ಮ ಕನ್ನಡ ಭಾಷೆಯನ್ನ, ಬನ್ನಿ
ಅದಕ್ಕಾಗಿ ಜೊತೆಯಾಗಿ ಸಂಬ್ರಮಿಸೋಣ, ದುಡಿಯೋಣ.

ಎಲ್ಲರ ಮನಸಿಗೆ ಸುಮಧುರ
ಗಾಯವನ್ನುಂಟುಮಾಡಲಿ,
ಕನ್ನಡದ ಹೂಬಾಣ
ಕನ್ನಡದ ಹೂಬಾಣ

=====
=====

Oct 21, 2010

"ಪ್ರೇಮಕಾವ್ಯ"

ಅದೆಲ್ಲೋ ಕುಳಿತು
ಅದೆಲ್ಲೋ ನಿಂತು
ನಿನ್ನ ಏಕಾಂತ ಗರ್ಭವತಿಯಾದಾಗ
ನೀ ಕಂಡ ಕನಸುಗಳನ್ನ, ನಾ ಹೇಗೆ ತಾನೇ ಬಲ್ಲೆ.

ಅದೆಷ್ಟು ಸುಂದರವಾಗಿರಬೇಕು ನೀನು ಚೆಲುವೆ
ನಿನ್ನ ಬರಹವೇ ವರ್ಣಿಸಲಾಗದಷ್ಟು ಚೆಂದವಾಗಿದೆಯಲ್ಲೆ.

ಭಾವನೆಗಳ ಗಟ್ಟಿತನಕೆ,
ವಾಸ್ತವಕೆ ಹತ್ತಿರವಿರುವ ನಿನ್ನ ಕನಸುಗಳಿಗೆ
ಬೆಲೆ ಕಟ್ಟಲು ಸೋತಿರುವೆ ನಾನಿಲ್ಲಿ.

ನೀ ಬರೆದ ಪ್ರತಿ ಪ್ರೆಮಪತ್ರವೂ
ಮಹಾಪ್ರೇಮಕಾವ್ಯವಾಯಿತು ಎದೆಯಲ್ಲಿ.

ಕಾದು ಕುಳಿತಿರುವೆ
ಮತ್ತೊಂದು ಪ್ರೇಮಕಾವ್ಯದ ನಿರೀಕ್ಷೆಯಲ್ಲಿ . . . .

=====
=====

Oct 11, 2010

"ಮಳೆಗೊಂದು ಮಾತು"

ಸುರಿವ ಮಳೆಯೇ ಸಾಕು
ಏಕೆ ನಿನ್ನೀ ಹಠ ?
ನೀನೆಷ್ಟೇ ಸುರಿದರು ನನ್ನ ತಣಿಸಲಾರೆ,
ಗಾಯವನ್ನ ಗುಣಪಡಿಸಲಾರೆ.

ಭೋರ್ಗರೆದ ಮಳೆಯಿಂದ
ಹಳೆಯ ಮನೆಗಳೆಲ್ಲ ಕುಸಿದಂತೆ
ನೋವಿನ ಮನೆ ಕುಸಿಯದು.
ಮರ-ಗಿಡಗಳ ಬದುಕಿಸಲು
ಸುರಿದು ನೀನು, ಕಾಡ್ಗಿಚ್ಚನ್ನು ಆರಿಸಬಹುದು.
ದಿವ್ಯ ತಿರಸ್ಕಾರದಿಂದ, ಮನದಲಿ
ಹೊತ್ತಿ ಉರಿಯುತಿರುವ ಜ್ವಾಲೆಯ ನೀ ಆರಿಸಲಾರೆ.

ಮಳೆಯೇ,
ನೀನು ರೈತನ ಕಷ್ಟ ಮರೆಮಾಡಬಹುದು,
ನನ್ನ ಕಣ್ಣಂಚಿನ ನೋವು ಮರೆಮಾಡಬಹುದು.
ನನ್ನ ಹೃದಯದೊಳಗೆ ಕಾಣದಿರುವ ಕಣ್ಣೀರ ನೀ
ಅನುಭವಿಸಲಾರೆ, ಮರೆಮಾಡಲಾರೆ.
ದಯಮಾಡಿ ಸುಮ್ಮನಾಗು

ಸತತವಾಗಿ ಸುರಿದು
ನಾನೇ ಉರಿಸಿ, ಆರಿಸಿ ಎಸೆದ
ಸಿಗರೇಟಿನ ತುಂಡುಗಳನ್ನ,
ಕಾಗದದ ದೋಣಿಯಂತೆ ತೇಲಿಸಬಹುದು.
ಆಸೆಗಳು ನುಚ್ಚುನೂರಾದ ಎದೆಯೊಳಗೆ
ನಿರಂತರವಾಗಿ ಕುದಿಯುವ ಲಾವರಸವಿದೆ !
ನೀನೆಷ್ಟೇ ಸುರಿದರೂ, ಏನೂ ಆಗದು.

ಮಳೆಯೇ ನಿನ್ನದು
ಪಲಿತಾಂಶವಿರದ ಪ್ರಯತ್ನ.
ನಿನಗೆ, ನನ್ನದೊಂದು ವ್ಯಂಗ್ಯನಗು.
ಇನ್ನು ನಿನ್ನಿಷ್ಟ.

=====
=====