Sep 28, 2011

"ಅಪ್ಪ-ಅಮ್ಮ & SEX"


ನಮಗಂತೂ ಆಗಲಿಲ್ಲ ಮಕ್ಕಳಾದರು ಓದಲಿ. ಚೆನ್ನಾಗಿ ಓದಲಿ. ಓದಿ ಜ್ಞಾನ ಸಂಪಾದನೆ ಮಾಡ್ಲಿ. ಒಳ್ಳೆ ಮನುಷ್ಯ ಆಗ್ಲಿ. ನಮಗ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ, ಮಗಳ ವಿದ್ಯಾಭ್ಯಾಸಕ್ಕೆ ಯಾವ್ದು ಆಡ್ದಿಯಾಗ್ಬಾರ್ದು. ಹೀಗೆ ಇದೆ ರೀತಿಯ ಹಲವಾರು ಆಸೆಗಳಿರುವ ಸಾಮಾನ್ಯ ಮದ್ಯಮ ವರ್ಗದ ತಂದೆ ತಾಯಿಗಳಂತೆ, ಅವರು ಕೂಡ. ತಮ್ಮ ಅದೆಷ್ಟೋ ಆಸೆ, ಕನಸುಗಳನ್ನ ಬಲಿಕೊಟ್ಟು ಓದಿಸಿದರು. ಮಗಳು ಈಗ ಬೆಂಗಳೂರಿನಲ್ಲಿ ಇಂಜೀನಿಯರ್ . "ಹುಡುಗೀನ ಯಾಕ ಓದಸ್ತೀರ ಮದುವೆ ಮಾಡಿ" ಆನ್ನೋ ಮಾತಿಗೆ ಗಮನ ಕೊಡದೆ ಮಗಳನ್ನ ಕಾಲೇಜಿಗೆ ಸೇರಿಸಿದ ಅವಳ, ಅಪ್ಪ-ಅಮ್ಮ ಎಂಬ ಆ ಎರಡು ಜೀವಗಳಿಗೆ ಅದೆಂಥದೋ ಹೇಳಲಾಗದ ಸಂಬ್ರಮ. ಅದೆಷ್ಟು ಕಷ್ಟ ಪಟ್ಟಿದ್ದವು ಆ ಜೀವಗಳು. ಬೆಂಗಳೂರಿನಿಂದ ಸರಿ ಸುಮಾರು 470 km ದೂರದ ಊರು ಅವರದು. ತಂದೆ-ತಾಯಿ ಇಬ್ಬರಿಗೂ ಬೆಂಗಳೂರು ಆಕಸ್ಮಿಕ ಮತ್ತು ಅಪಚಿತ.

ಆ ಊರಿನ ಮೊದಲ ಇಂಜೀನಿಯರ್ ಅವಳು, ಕಾಲೇಜಿನ ಕ್ಯಾಂಪಸ್ ಇಂಟರ್ವೀವ್ ನಲ್ಲೆ ಒಂದು ಕಂಪನಿಗೆ ಸೆಲೆಕ್ಟ್ ಆಗಿದ್ದಳು. ಡಿಗ್ರೀ ಕಂಪ್ಲೀಟ್ ಆದಮೇಲೆ ಸ್ವಲ್ಪ ದಿನ ಊರಲ್ಲಿ ಅಪ್ಪ-ಅಮ್ಮ ನೊಂದಿಗಿದ್ದು ಈಗ್ಗೆ ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಳೆ - ಕಂಪನಿಯವರು joining date ಕೊಟ್ಟಿದಾರೆ. ಹುಡುಗಿಯರ paying guest ನಲ್ಲಿದಾಳೆ. ಕಂಪನಿಯಲ್ಲಿ ಇನ್ನೂ ಟ್ರೈನಿಂಗ್ ನಡೀತಾಯಿದೆಯಾದ್ದರಿಂದ ಸಂಬಳ ಸ್ವಲ್ಪ ಕಡಿಮೆ ಅದರಲ್ಲೇ ಸ್ವಲ್ಪ ಮನೆಗೆ ಕೊಡ್ತಾಯಿದಾಳೆ. ಅಪ್ಪ-ಅಮ್ಮನಿಗೋ ಮಗಳು ದುಡಿದು ನೂರು ರುಪಾಯಿ ಕೊಟ್ಟರು ಅವರ ಸಂತೋಷಕ್ಕೆ ಪಾರಾವೆಯಿರುವುದಿಲ್ಲ. ಮಗಳು ಕೊಡುವ ಕೆಲವು ಸಾವಿರ ರೂಪಾಯಿಗಳನ್ನ ತಾಯಿ ಅದೆಷ್ಟು ಬಾರಿ ಮುಟ್ಟಿ ಕಣ್ಣಿಗೊತ್ತಿಕೊಂಡು ಕಣ್ಣೀರಾದರೋ ಏನೋ - ತೀರದ ಆನಂದ ಭಾಷ್ಪ. ತಂದೆಗೆ ಏನನ್ನೋ ಸಾಧಿಸಿದ ಸಮಾಧಾನ. ದೂರದಲ್ಲೆಲ್ಲೋ, ಮಗಳು ಕೊಟ್ಟ ಹಣದಲ್ಲಿ ಮಗಳಿಗೇ ಸಣ್ಣ ಪುಟ್ಟ ಚಿನ್ನದ ಒಡವೆ ಖರೀದಿಸುವ ಕನಸು ಕಾಣುವ ತಾಯಿ. ಇನ್ನೂ ಮದುವೆ ತಯಾರಿ ಮಾಡ್ಕೊಬೇಕು ಅಂತ ವಿಚಾರ ಮಾಡೋ ತಂದೆ. . . .

. . . . .ಆದರೆ ದುರಂತ
ಇಂಜೀನಿಯರಿಂಗ್ 3 ನೇ ವರ್ಷದ ಕೊನೆಯಲ್ಲಿ ಕಂಪನಿಯೊಂದಕ್ಕೆ ಸೆಲೆಕ್ಟ್ ಆದ ಆ ಹುಡುಗಿ ನಂತರ ಬದಲಾಗಿದ್ದಳು. ಕೋತಿಗೆ ಹೆಂಡ ಕುಡಿಸಿದಂತಾಯ್ತು. ಜೋರು ಜೋರು ಪಾರ್ಟಿಗಳು ಶುರುವಾದವು, ಪ್ರತಿ ಕಂಪನಿಯಲ್ಲಿ ಸೆಲೆಕ್ಟ್ ಆದವರೆಲ್ಲ ಕೊಡುವ ಪಾರ್ಟಿ. ಮತ್ತೊಮ್ಮೆ ತೀರ ಆತ್ಮೀಯರಿಗೆ ಒಂದು ಪಾರ್ಟಿ.ಪಾರ್ಟಿಗಳಲ್ಲಿ ಬೇರೆ ಬೇರೆ ರೀತಿಯ ಮೋಜು ಮಸ್ತಿಗಳು ಇಷ್ಟವಾದವು, ಯೌವನ ನೆತ್ತಿಗೇರಿತು ಹಾಗೆ ಚಟಗಳು ಮೈಯಿಗೇರಿದವು. ಬೆಂಗಳೂರಿಗೆ ಬಂದಿರುವ ಆ ಹುಡುಗಿ ಇನ್ನೂ ಕಂಪನಿಗೆ join ಆಗಿಲ್ಲ ! ಆ ಹುಡುಗಿ, ladies paying guest ನಲ್ಲಿ ಇಲ್ಲ !! ಬೆಂಗಳೂರಿನಲ್ಲಿ ಒಬ್ಬ ಹುಡುಗನ ರೂಮಿನಲ್ಲಿದಾಳೆ !!! ಮನೆಯಲ್ಲಿ ತಂದೆ-ತಾಯಿಗೆ ಸುಳ್ಳು ಹೇಳಿ ಬಂದಿದ್ದಾಳೆ. ಡಿಸೆಂಬರ್ ನಲ್ಲಿ ಕಂಪನಿಯವರು ಜಾಯ್ನಿಂಗ್ ಡೇಟ್ ಕೊಟ್ಟಿದಾರೆ ಆದ್ರೆ ಇವ್ಳು ಬಂದಿರೋದು ಜುಲೈ ನಲ್ಲಿ ! no news about any crash course or something like that.

ಅದೆಷ್ಟೋ ಜನರ ಕೈ-ಕಾಲು ಹಿಡಿದು ಅಮಾಯಕ ತಂದೆ-ತಾಯಿ ಓದಿಸಿದ್ದರು. ತಮ್ಮ ಜೀವನದ ಆಶಾಕಿರಣ ಅಂತ ಭಾವಿಸಿರುವ ನಿಷ್ಕಲ್ಮಶ ಮನದ ಜೀವಗಳ ಮುದ್ದಿನ ಮಗಳ ಮೈ ಚಟಕ್ಕೆ ಬಿದ್ದುಬಿಟ್ಟಿದೆ - ಕಾಮಾತುರಣಂ ನ ಭಯಂ ನ ಲಜ್ಜಾ. ಪ್ರತಿ ಸಲ ಕಾಮಕ್ರೀಡೆ ಮುಗಿದ ಮೇಲೆ ಆ ಹುಡುಗ ಸೋಸಿಯಲ್ ನೆಟ್ವರ್ಕ್ ನಲ್ಲಿ ಬೇರೆಯ ರೀತಿಯಲ್ಲಿ ಅಪ್ಡೇಟ್ ಮಾಡ್ತಾನೆ ಈ ಹುಡುಗಿ ಅದನ್ನ ಲೈಕ್ ಮಾಡ್ತಾಳೆ. ಆ ಹುಡುಗಿ ಮನೆಗೆ ಕೊಡುವ ಹಣ ಆ ಹುಡುಗನದ್ದೆ !! ತಮ್ಮಿಬ್ಬರ ಈ ಕಳ್ಳ ವ್ಯವಹಾರ ತಮ್ಮ ಕಾಲೇಜಿನ ಕೆಲವರಿಗೆ ತಿಳಿದಿದೆ ಅಂತಲೂ ಅವರಿಗೆ ಗೊತ್ತು, ಆದರೂ ಯಾವ ಭಯ,ಸಂಕೋಚ ಅವರಿಗಿಲ್ಲ. ಹೆತ್ತವರ ಅಮಾಯಕತೆ, ಮುಗ್ಧತೆಯನ್ನ ದುರುದ್ದೇಶಕ್ಕೆ ಬಳಸಿಕೊಂಡವರು ಯಾರಿಗೆ ತಾನೇ ಹೆದರ್ತಾರೆ. 'ಇದು ತಪ್ಪಲ್ವಾ ?' ಅಂತ ಕೇಳಿದ್ರೆ 'ಅವಳಿಗೆ ಏನ್ ಬೇಕೊ ಅದನ್ನ, ನಾ ಕೊಡ್ತಿನಲ್ಲ ಮಗ' ಅಂತಾನೆ ಆ ಹುಡುಗ. ಮದುವೆ ಬಗ್ಗೆ ಕೇಳಿದ್ರೆ, ಅಂಥದೊಂದು ಇದಿಯಾ ಅನ್ನುವ ಹಾಗೆ ಮುಖ ನೋಡ್ತಾರೆ. ಇದನ್ನ ಓದಿದ ಮೇಲೆ ಆ ಹುಡುಗಿ, ಏನೂ ತಿಳಿಯದ 'ಮಾಸೂಮ್' ಅಂತೂ ಅಲ್ಲ ಅನ್ನೋದು ನಿಮಗೂ ಮನವರಿಕೆಯಾಗಿದೆ ಅನ್ಕೊಂಡಿದಿನಿ. so, They are not cheating on each other but, just ENJOYING together.

ದೊಡ್ಡ ದುರಂತ . . . .
ಈವರೆಗೆ ನೀವು ಓದಿದ್ದು ಕಾಲ್ಪನಿಕ ಕಥೆಯಲ್ಲ.

ಪ್ರಶ್ನೆಗಳು ::
1) 22 ವರ್ಷ ಪ್ರೀತಿ, ವಾತ್ಸಲ್ಯ, ಮಮಕಾರ, ಕಾಳಜಿ, ವಿದ್ಯಾಭ್ಯಾಸ, ಊಟ, ಬಟ್ಟೆ, ಹಣ ಎಲ್ಲಕ್ಕಿಂತ ಮುಖ್ಯವಾಗಿ ಜನ್ಮ ಕೊಟ್ಟ ಅಪ್ಪ-ಅಮ್ಮನಿಗೆ ಈ ಮಟ್ಟದ ನಯವಂಚನೆ, ನಂಬಿಕೆ ದ್ರೋಹ ಮಾಡಲು ಮನಸ್ಸಾದರೂ ಹೇಗೆ ಬರುತ್ತೆ ?
2) ಅಪ್ಪ-ಅಮ್ಮನ ವಾತ್ಸಲ್ಯದ ಬಿಸುಪಿಗಿಂತ ಹಾಸಿಗೆಯ ಮೇಲಿನ SEX ಹೆಚ್ಚು ಸುಖ,ಶಾಂತಿ, ನೆಮ್ಮದಿ ನೀಡುತ್ತಾ ?
3) ಕೇವಲ ಎರಡು ವರ್ಷಗಳ ಹಿಂದೆ ಪರಿಚಯವಾದವರ ಪ್ರೇಮ, ಮೈಥುನ; ತಂದೆ-ತಾಯಿಯೊಂದಿಗೆ ಐದು ತಿಂಗಳು(ಜುಲೈ -- ಡಿಸೆಂಬರ್) ಇರಲಾರದಷ್ಟು ಕೆರಳಿಸುತ್ತವಾ ? ಅಥವಾ, ತಂದೆ-ತಾಯಿ ಬೇಡವಾಗಿಬಿಡುತ್ತಾರಾ ?
4) ಟ್ರೈನಿಂಗ್ ನಲ್ಲಿ ಕಡಿಮೆ ಸಂಬಳ ಅಂತ ಹೇಳಿದ ಮಗಳು ಯಾವುದರ ಟ್ರೈನಿಂಗ್ ನಲ್ಲಿದ್ದಾಳೆ, ಇದೆ ಟ್ರೈನಿಂಗ್ ಆದ್ರೆ ನಂತರದ ವೃತ್ತಿ ?
5) ಊರ ತುಂಬಾ ತಮ್ಮ ಮಗಳು ಕಂಪನಿಯಲ್ಲಿ ದುಡಿದು ಹಣ ಕಳಿಸಿದಾಳೆ ಅಂತ ಹೇಳಿಕೊಳ್ಳುವ ತಂದೆ-ತಾಯಿಗಿದು ತಿಳಿದರೆ ಅವರು ಏನಾಗ್ತಾರೆ ?
6) now we are in relationship ಅಂತ ಹೇಳುವ ಇವರದು ಇದೇನು ಹಾದರವಾ ? ಆತ್ಮವಂಚನೆಯಾ ? ಟೈಮ್ ಪಾಸ್ ?ಅಥವಾ, ಯಾಮಾರಿ ಅಪ್ಪಿ-ತಪ್ಪಿ ಇದಕ್ಕೆ LOVE ಅಂತಾರ?
7) ನಿಜ ಹೇಳಿ, ಇಂಥವರು ಮದುವೆಯಾಗಿ ನೆಟ್ಟಗೆ ಸಂಸಾರ ಮಾಡ್ತಾರೆ ಅಂತ ನಿಮಗನ್ನಿಸುತ್ತಾ ? (ನನಗಂತೂ ಇಲ್ಲ)
8) ಮುಂದೆ ಈ ಹುಡುಗ, ಹುಡುಗಿಯನ್ನ ಮದುವೆಯಾಗೋ ಯಾವುದೋ ಹುಡುಗಿ, ಹುಡುಗನ ಪಾಡೇನು ?
9) ನಮ್ಮನ್ನ ಹೆತ್ತವರು ನಮ್ಮೊಂದಿಗೆ ಸಮಯ ಕಳೀಬೇಕು ಅಂತ ಕಾಯ್ತಿರ್ತಾರೆ, ಕಾಲೇಜ್ ನಲ್ಲಿ ನಡೆದ ಸಣ್ಣ ಸಣ್ಣ ಘಟನೆಗಳನ್ನ ಹೇಳುವಾಗ ಬೆರಗುಗಣ್ಣಿನಿಂದ ಕೇಳ್ತಾರೆ; ಇವು ನಮಗೆ ನೆನಪಾಗಲ್ವಾ ?
10) ಯಾವ ನೆಲದವರು ನಾವು ? ಎಲ್ಲಿರುವೆವು ? ಎಲ್ಲಿಗೆ ಹೊರಟಿರುವೆವು ? ಅಸಲಿಗೆ ಯಾರು ನಾವು ?

ಹೀಗೆ ನನಗೆ ನಾನೇ ಪ್ರಶ್ನೆ ಹರವಿಕೊಂಡು ಉತ್ತರ ಕೊಡುವ ಪ್ರಯತ್ನ ಮಾಡುತ್ತಾ, ತುಂಬಾ ಬೇಜಾರಾಗಿ ಇದ್ಯಾಕೆ ಹಿಂಗ್ ಮಾಡ್ತು ಹುಡುಗಿ ಅಂತ ಯೋಚಿಸ್ತಿರುವಾಗಲೇ. ಚಕ್ಕನೆ ಹೆಸರೊಂದು ಮಿಂಚಿದಂತಾಯ್ತು, ಅದು ಕೂಡ ಹುಡುಗಿಯ ಹೆಸರೇ - 'ಐರೊಮ್ ಚಾನು ಶರ್ಮಿಲ'. ಆಕೆ Iron lady of Manipur. ತನ್ನ 28 ನೇ ವಯಸ್ಸಿನಿಂದ Armed Forces (Spacial Powers)Act, 1958 (AFSA) ವಿರುದ್ದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ ಶರ್ಮಿಲ. ಈಗ ಆಕೆಗೆ 39 ವರ್ಷ ವಯಸ್ಸು, ಅಂದ್ರೆ ಕಳೆದ ಹನ್ನೊಂದು ವರ್ಷಗಳಿಂದ ಶರ್ಮಿಲ ಉಪವಾಸವಿದ್ದಾಳೆ. ಪ್ರಪಂಚದ ಅತ್ಯಂತ ಕಿರಿಯ ವಯಸ್ಸಿನ 'Hunger striker' ಈವರೆಗೂ ಊಟ ಇಲ್ಲ, ನೀರು ಇಲ್ಲ. ಶರ್ಮಿಲ ಅವರ ಮೂಗಿಗೆ ಒಂದು ಪೈಪ್ ಇರುತ್ತೆ ಆ ಪೈಪ್ ಮೂಲಕ ದಿನ ಸ್ವಲ್ಪ ಹಣ್ಣಿನ ರಸ ಹನಿಹನಿಯಾಗಿ ಆಸ್ಪತ್ರೆಯವರು ಕೊಡ್ತಾರೆ. 11 ವರ್ಷಗಳಿಂದ ಶರ್ಮಿಲ ಅವರ ಮೂಗಿನ ಪೈಪ್ ಆಕೆಯ ದೇಹದ ಒಂದು ಭಾಗವೇನೋ ಎಂಬಷ್ಟರಮಟ್ಟಿಗೆ ಒಗ್ಗಿಹೋಗಿದೆ. ಊಟ ಮೂಗಿನ ಮೂಲಕ ಅದೂ ಸ್ವಲ್ಪ ಹನಿ ಹಣ್ಣಿನ ರಸ ಅಷ್ಟೇ - Oh My God. ತನ್ನ ಜನರ ಸಲುವಾಗಿ ತನ್ನ ಜೀವನವನ್ನೇ ಮುಡಿಪಾಗಿತ್ತು ಅವಿರತ ಹೋರಾಡುತ್ತಿರುವ 'ಶರ್ಮಿಲ' ಅವರ ಆತ್ಮಸ್ಥೈರ್ಯಕ್ಕೆ ನಮೋನ್ನಮಃ.

=====
=====

Sep 4, 2011

". . . . ಮತ್ತದೇ ನೆನಪು . . . ."

'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು' ಹಾಗಂತಲೇ ಶುರುವಾಗುತ್ತಿತ್ತು ಮಾತು.
ಆ ದಿನಕ್ಕಿಂತ ಒಂದು ವಾರ ಮೊದ್ಲೇ ಒಬ್ಬ ಸ್ಟುಡೆಂಟ್ ಇಷ್ಟು ಹಣವನ್ನ ಕೊಡ್ಬೇಕು ಅಂತ ಕ್ಲಾಸ್ ನ ಸ್ಟುಡೆಂಟ್ representative announce ಮಾಡಿರ್ತಿದ್ದ. ಸರಿ, ಎಲ್ಲರು ಕೊಟ್ಟಾದಮೇಲೆ; ಮೊದಲೇ ಅಂದುಕೊಂಡ ಹಾಗೆ ಬಣ್ಣ ಬಣ್ಣದ paper cuttings, ಥರ್ಮೊಕೊಲ್, ಗಮ್ ಮತ್ತು decorationಗೆ ಬೇಕಾದ ಎಲ್ಲಾ ವಸ್ತುಗಳು ತರುವ ಕೆಲಸ.

ಪ್ರತಿ ದಿನ ಸಂಜೆ ಗುಂಪು ಗುಂಪಾಗಿ ಮಾರ್ಕೆಟ್ ಗೆ ಹೋಗಿ ನಮಗೆ ಬಂದಷ್ಟು ಚೌಕಾಸಿ ಮಾಡಿ ಆ ವಸ್ತುಗಳನ್ನ ತರ್ತಾಯಿದ್ವಿ . ನಾವು ಹೇಗೆ ಖರೀದಿ ಮಾಡ್ತಾಯಿದ್ವಿ ಅನ್ನೋದನ್ನ ನೆನಸಿಕೊಂಡ್ರೆ ಈಗ್ಲೂ ನಗು ಬರುತ್ತೆ. 'ಏ, ನಮ್ಮನೆ ಹತ್ರ ಅದು ಸಿಗುತ್ತೆ ಅಲ್ಲೇ ತೊಗೊಳೋಣ', 'ಏ ಇದು ನನ್ನ ಅಂಕಲ್ ಹತ್ರ ಇದೆ ನಾನೇ ತರ್ತೀನಿ ಬಿಡು' ಇಂತಹ ಮಾತುಗಳಲ್ಲಿ ವ್ಯಾಪಾರ ಮುಗೀತಿತ್ತು. ಒಂದು ವಸ್ತು ತರಲಿಕ್ಕೆ ಹೋದ್ರೆ ಎಂಟು-ಹತ್ತು ಜನ ಹೋಗ್ತಾಯಿದ್ವಿ. ಮಾರ್ಕೆಟ್ ನಲ್ಲಿ ಸಿಗೋದನ್ನ ಬಿಟ್ಟು ಅದೇ ವಸ್ತುವನ್ನ ಎಲ್ಲೋ ಗೆಳೆಯನ ಮನೆ ಹತ್ರ ಇರೋ ಚಿಕ್ಕ ಅಂಗಡಿಯಲ್ಲಿ ಖರೀದಿ. ಹುಡುಗಿಯರದು ಅಲಂಕಾರಕ್ಕೆ ಬೇಕಾದ ಬಣ್ಣ ಬಣ್ಣದ ರಂಗೋಲಿ ಪುಡಿ, ಸೀರೆಗಳನ್ನ ಮನೆಯಿಂದ ತರುವ department.
'ನೀನು ನಿರೂಪಣೆ ಮಾಡು, ಮಾಡ್ತಿಯ ತಾನೇ ?'

ಹೀಗೆ ಎಲ್ಲಾ ಕೆಲಸವನ್ನ ಹಂಚಿಕೊಂಡು ಶ್ರದ್ದೆಯಿಂದ ಮಾಡಿಯಾದ ಮೇಲೆ ಆ ದಿನ ಬರುತ್ತಿತ್ತು, ಆ ಮಾತು ಕೂಡ : 'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು'. standing in-front of principal is always tough job. ಗುಂಪಾಗಿ ಎಲ್ಲರು ಪ್ರಿನ್ಸಿಪಾಲ್ ರೂಮ್ ಹತ್ರ ಹೋಗಿ ನಿಂತು 'ಏ ನೀ ಹೋಗು' , 'ಏ ನೀನೆ ಹೋಗೋ' ಅಂತ ಗುಸು ಗುಸು ಅಂತಿದ್ವಿ.

ಕೆಲವೊಬ್ಬರು ಸ್ವಲ್ಪ ಗಟ್ಟಿ ಧೈರ್ಯ ಮಾಡಿ ಪ್ರಿನ್ಸಿಪಾಲ್ ರೂಮಿನ ಮುಂದೆ ನಿಂತು
'ಮೇ ಐ ಕಮ್ ಮ್ಯಾಮ್ / ಸರ್' ಅನ್ನುವಷ್ಟರಲ್ಲಿ ಜೀವ ಹಾರಿ ಹೋದ ಅನುಭವ.
'ಯೆಸ್' ಅದೇ ಗಂಭೀರ ದನಿ. ಒಳಗೆ ಹೋದ ಮೇಲೆ ಯಾರಿಗೂ ಉಸಿರು ಅಷ್ಟು ಸಲೀಸಾಗಿ ಹೊರ ಬರುತ್ತಿರಲಿಲ್ಲ. ಹೊರಗೆ ನಿಂತವರಿಗೆ ಆ ರೂಮಿನಿಂದ ಏನೋ ವಿಸ್ಮಯ ಹೊರಬರಲಿದೆಯೇನೋ ಅನ್ನುವಷ್ಟು ಕಾತುರ.
ಪ್ರಿನ್ಸಿಪಾಲ್ ಕೇಳೋದು 'ಏನ್ರೋ?'
'ನಾಳೆ. . . ನಾಳೆಗೆ ಕ್ಲಾಸ್ ರೂಮ್ decorate ಮಾಡ್ಬೇಕು. ಅದಕ್ಕೆ, '
'ಅದಕ್ಕೆ ?'
'ಕ್ಲಾಸ್ ರೂಮ್ ಕೀ ಬೇಕಿತ್ತು'
ಯಾವ ಕ್ಲಾಸ್, ಯಾವ ಸೆಕ್ಷನ್, ಯಾರು ಕ್ಲಾಸ್ ಟೀಚರ್ ಎಲ್ಲಾ ಕೇಳಿದ ಮೇಲೆ 'ಓಕೆ' - permission granted.
ಅವತ್ತಿನ ದಿನದ requestನ್ನ ಯಾರೇ ಪ್ರಿನ್ಸಿಪಾಲ್ ಆಗಿದ್ರು ಅವ್ರು 'ನೋ' ಅನ್ನಲ್ಲ. ಆದರೂ ನಮಗೆ ಪ್ರತಿ ವರ್ಷ ಪ್ರಿನ್ಸಿಪಾಲ್ ರೂಮ್ ಮುಂದೆ ನಿಂತಾಗ ಹೆದರಿಕೆ ಆಗುತಿತ್ತು ಅನ್ನೋದು ಸುಳ್ಳಲ್ಲ.


ಎಲ್ಲಾ ಹುಡುಗ ಹುಡುಗಿಯರು ಸೇರಿ ಕ್ಲಾಸ್ ರೂಮಿನ ಅಲಂಕಾರ ಮಾಡಲು ಶುರು ಮಾಡುತ್ತಿದ್ದೆವು, ಏಳು ಗಂಟೆಯ ನಂತರ ಅದೇ ಊರಿನವರು ಮನೆಗೆ ಹೋಗ್ತಾಯಿದ್ರು. ನಾವು ಹಾಸ್ಟೆಲ್ ಹುಡುಗರು- ನೈಟ್ ಡ್ಯುಟಿ. ಮಧ್ಯರಾತ್ರಿವರೆಗೂ ಅಲಂಕಾರ: ಪಕ್ಕದ ಕ್ಲಾಸ್ ರೂಮಿನವರು ಏನ್ ಮಾಡ್ತಿದಾರೆ, ಎಷ್ಟು ಕೆ.ಜಿ ಕೇಕ್ ಆರ್ಡರ್ ಮಾಡಿದಾರೆ . . .ಇಂತವುಗಳ ಬಗ್ಗೆ discussion ಕೂಡ ನಡೆಯುತ್ತಿತ್ತು. decoration ಎಲ್ಲಾ ಮುಗೀತು ಅಂದುಕೊಳ್ಳುವಷ್ಟರಲ್ಲಿ 'ಬ್ಲ್ಯಾಕ್ ಬೋರ್ಡ್ ಮೇಲೆ ಬಣ್ಣದ ಚಾಕ್ ಪೀಸ್ ಗಳಿಂದ design ಮಾಡ್ಬೇಕು, sayings ಬರೀಬೇಕು, class teacher ಹೆಸರು ಬರೀಬೇಕು'. ಅಯ್ಯೋ ಮುಗೀತು ಅಂದ್ರೆ ಇನ್ನೂ ಕೆಲಸ ಇದೆ. 'ಬೇಗ ಮಲಗ್ರೋ ಬೆಳಗ್ಗೆ ಬೇಗ ಮಾರ್ಕೆಟ್ ಗೆ ಹೋಗಿ ಹೂವು ತರ್ಬೇಕು, ಬೇಕರಿಯಿಂದ snacks, ಕೇಕ್ ತರ್ಬೇಕು'.


ಈ ಎಲ್ಲಾ ಗಲಿಬಿಲಿ, ಸಂತಸ, ಹರಟೆ, amateur ಆದ ವ್ಯಾಪಾರ, ಪಕ್ಕದ ಕ್ಲಾಸ್ ನವರ ಜೊತೆ competition ಗಳ ದಾಟಿಕೊಂಡು 'ಬೆಳಕಿನೊಂದಿಗೆ' ಬಂದುಬಿಡುತ್ತೆ ಆ ದಿನ "September 5". ಅದೊಂದು ವಿದ್ಯಾರ್ಥಿ ಜೀವನದ ಮರೆಯಲಾಗದ ಪ್ರೀತಿಯ ದಿನ "ಶಿಕ್ಷಕರ ದಿನ". ಪ್ಲೇ ಗ್ರೌಂಡಿನಲ್ಲಿ 'HAPPY TEACHERS DAY' ಅಂತ ಜೋರಾಗಿ ಕೂಗುವುದರೊಂದಿಗೆ(ಕಿರುಚುವುದರೊಂದಿಗೆ) ಶುರುವಾಗುತ್ತಿತ್ತು ಸಂಬ್ರಮ. ಅಷ್ಟು ಜೋರಾಗಿ ಗ್ರೌಂಡಿನಲ್ಲಿ ಕಿರುಚಿದರೂ ಪ್ರಿನ್ಸಿಪಾಲ್ ಒಮ್ಮೆಯೂ ಬೈದಿಲ್ಲ. ಸುಮ್ನೆ ನಿಂತು ನೋಡಿ, ನಕ್ಕು ಹೋಗುತ್ತಿದ್ದರು, ಅದೇ ಬೇರೆ ದಿನ ಆಗಿದ್ರೆ, ಬೇರೆ ಏನಾದ್ರೂ ಕಿರುಚಿದ್ರೆ ? (ಯಪ್ಪಾ, ಬದುಕೋದು ಉಂಟೆ ?)


ಅವತ್ತಿನ ದಿನದ ಸಂಬ್ರಮವೇ ಸಂಬ್ರಮ . . . ಮೊದಲು auditorium ನಲ್ಲಿ ಕಡಿಮೆ ಅಂದ್ರು ಎರಡು ತಾಸುಗಳ ಕಾರ್ಯಕ್ರಮ ಶಾಲೆಯ ಎಲ್ಲರು ಅಲ್ಲಿರ್ತಾರೆ. ನಂತರ ಅವರವರ ಕ್ಲಾಸ್ ನಲ್ಲಿ celebration, ಕ್ಲಾಸ್ ಟೀಚರಿಂದ ಕೇಕ್ ಕತ್ತರಿಸುವ ಘಳಿಗೆಯಂತೂ ಎಲ್ಲರ ಕಣ್ಣಲ್ಲಿ ಚಕ್ ಚಕ್ ಅಂತ ಕ್ಲಿಕ್ ಆಗ್ತಿತ್ತು(9th standard ವರೆಗೆ ನಮ್ಮ ಹತ್ರ ಕ್ಯಾಮರ ಇರ್ಲಿಲ್ಲ). ಅದೃಷ್ಟಕ್ಕೆ 10th standard celebration ಫೋಟೋಸ್ ನನ್ನತ್ರ ಇವೆ. ಕೆಲವರು ಶಾಲೆಯ ಬಗ್ಗೆ, ಟೀಚರ್ಸ್ ಬಗ್ಗೆ ಒಪಿನಿಯನ್ ಹೇಳ್ತಾಯಿದ್ರು, ನಂತರ ಕೆಲ ಟೀಚರ್ಸ್ ಮಾತಡ್ತಾಯಿದ್ರು ಕೊನೆಗೆ ಕ್ಲಾಸ್ ಟೀಚರ್ (ಎಲ್ಲರವು positive opinion). ನಮಗೆ subject handle ಮಾಡಿದ ಟೀಚರ್ಸ್ ಗೆ ನೆನಪಿನ / ಗೌರವದ ಕಾಣಿಕೆಯಾಗಿ ಪುಸ್ತಕಗಳನ್ನ ಕೊಡ್ತಾಯಿದ್ವಿ. ಆ ನಡುವೆ ಪ್ರಿನ್ಸಿಪಾಲ್ ಎಲ್ಲಾ ಕ್ಲಾಸ್ ಗಳನ್ನ ವಿಸಿಟ್ ಮಾಡ್ತಾಯಿದ್ರು. ಆಹಾ, ಖುಷಿಯೋ ಖುಷಿ.


ನಾವು ಹಾಸ್ಟೆಲ್ ಹುಡುಗರು ವಾರ್ಡನ್ ಗಳಿಗೆ ವಿಶ್ ಮಾಡಿ, ರಾತ್ರಿ ಊಟದ ಮುಂಚಿನ ಪ್ರಾರ್ತನೆಯ ಕೊನೆಗೆ ಅವರಿಗೆ 'ಥ್ಯಾಂಕ್ಸ್' ಹೇಳ್ತಾಯಿದ್ವಿ (ನಮ್ಮನ್ನ ವರ್ಷಾನುಗಟ್ಟಲೆ ಸಹಿಸಿಕೊಂಡಿದ್ದಕ್ಕೆ).
ಎಷ್ಟು ಚೆಂದದ ದಿನಗಳವು, ನನ್ನಲ್ಲಿ ಇನ್ನೂ ಹಸಿ ಹಸಿ . . . ನೆನೆದರೆ ಈಗಲೂ ಕಣ್ಣುಗಳು ಮೆಲ್ಲಗೆ ಹಸಿ.

ನಮ್ಮಂತ ಸೀನಿಯರ್ಸ್ ನಮ್ಮಂತ ಜೂನಿಯರ್ಸ್ ಸಲುವಾಗಿ , ಹಾಸ್ಟೆಲ್ ಬಿಲ್ಡಿಂಗ್ ನ ಕಬ್ಬಿಣದ ಗೇಟ್ ನಲ್ಲಿ '+' ಆಕಾರದಲ್ಲಿದ್ದ ಎರಡು ಸರಳುಗಳನ್ನ ಕಿತ್ತು ಕಿಂಡಿ ಮಾಡಿದ್ರು !! ಅದರ ಮೂಲಕ ಒಬ್ಬೊಬ್ಬರೇ ಹೊರ ಬಂದು, ಆದಷ್ಟು ಕತ್ತಲಲ್ಲೇ ಮೆಲ್ಲಗೆ ಓಡುತ ಹೋಗಿ (ಸೆಕ್ಯುರಿಟಿ ಕಣ್ಣಿಗೆ ಬೀಳದೆ) ಕಂಪೌಂಡ್ ಜಿಗಿದು ಸಿನಿಮಾ ನೋಡಿದ್ದು, ಗಲ್ಲಿ ಗಲ್ಲಿ ತಿರುಗಿ ಗಣೇಶ ಉತ್ಸವದಲ್ಲಿ ಪಾಲ್ಗೊಂಡಿದ್ದು. ಹಾಸ್ಟೆಲ್ ನಲ್ಲಿ ಇಡುತ್ತಿದ್ದ ಒಬ್ಬ ಗಣಪನ ಮುಂದಿದ್ದ ದೀಪ ಆರದಂತೆ ಕಾಯಲು ಕನಿಷ್ಠ 15 ಜನ, 5 ದಿನ ಶಾಲೆಗೆ ಚಕ್ಕರ್ ಹೊಡೆದದ್ದು. NCC ಡ್ರೆಸ್ ನಲ್ಲಿ ಫೋಟೋ ತೆಗೆಸಿಕೊಂಡದ್ದು, ಗೋವಾ ದಲ್ಲಿನ 14 ದಿನದ ನ್ಯಾಷನಲ್ ಟ್ರೆಕ್ಕಿಂಗ್ ಕ್ಯಾಂಪ್ .


ಹಾಸ್ಟೆಲ್ ನಲ್ಲಿ ನಾವು ಸ್ಟ್ರೈಕ್ ಮಾಡ್ತಿದ್ದದು ವಿಚಿತ್ರವಾಗಿತ್ತು : ಒಂದು ದಿನ ಎಲ್ಲರು ಇವತ್ತು ಬರೀ ಚಪಾತಿ ತಿನ್ಬೇಕು ಅಥವಾ ಬರೀ ಅನ್ನ ತಿನ್ಬೇಕು ಆಗ ಅದು shortage ಆಗುತ್ತೆ ಮತ್ತೆ ನಾಳೆ ಹಾಗಂತ ಪ್ರಿನ್ಸಿಪಾಲ್ ಗೆ ಕಂಪ್ಲೇಂಟ್ ಮಾಡೋದು. ಹೀಗೆ ಅಡುಗೆ ಭಟ್ಟರಿಗೆ ನಮ್ಮ ಅಸಮದಾನವನ್ನ ಮನವರಿಕೆ ಮಾಡುತ್ತಿದ್ದೆವು. ಕೆಲವೊಮ್ಮೆ ಹುಣ್ಣಿಮೆಯ ದಿನ 'ಬೆಳದಿಂಗಳ ಊಟ' ಇರುತ್ತಿತ್ತು - ಹಾಸ್ಟೆಲ್ ಮುಂದಿನ ಗ್ರೌಂಡಿನಲ್ಲಿ ಗುಂಪು ಗುಂಪಾಗಿ ಕೂತು ಒಂದೇ ತಟ್ಟೆಯಲ್ಲಿ ಊಟ. ಒಮ್ಮೆ ರಾತ್ರಿ ಸಿನಿಮಾ ನೋಡಲು ಹೋದಾಗ ವಾರ್ಡನ್ ಮಧ್ಯರಾತ್ರಿ attendance ತೊಗೊಂಡಿದ್ರು - needless to say we were punished. ನಾವು ವರ್ಷದ ಕೊನೆಯಲ್ಲಿ 'ಹಾಸ್ಟೆಲ್ ಡೇ' celebrate ಮಾಡ್ತಿದ್ವಿ with lot of cultural / funny activities. school ಕಿಡಕಿಯ ಸುಮಾರು ಐವತ್ತಕ್ಕೂ ಹೆಚ್ಚು ಗ್ಲಾಸ್ ಗಳನ್ನ ವಿನಾಕಾರಣ ಒಡೆದು ಹಾಕಿದಾಗ, ಪ್ರಿನ್ಸಿಪಾಲ್, ನಮ್ಮ ಮನೆಗೆ ಫೋನ್ ಮಾಡುವುದಾಗಿ ಹೆದರಿಸಿ, ನಮ್ಮನ್ನ suspend ಮಾಡುವ ಮಟ್ಟಿಗೆ ಯೋಚನೆ ಮಾಡಿದ್ದು ಆಗ ಹಾಸ್ಟೆಲ್ ವಾರ್ಡನ್ ದೇವರಂತೆ ಬಂದು ನಮ್ಮನ್ನ ಕಾಪಾಡಿದ್ದರು - Apology letter ಬರೆದದ್ದು ಆಯಿತು.

Exams ಹತ್ರಯಿದ್ದಾಗ ರಾತ್ರಿ ಪ್ಲೇ ಗ್ರೌಂಡಿನ ಲೈಟಿನ ಬೆಳಕಿನಲ್ಲಿ ಓದೋದು - 'ವಿಶ್ವೇಶಯ್ಯ, ಅಂಬೇಡ್ಕರ್ ಹಿಂಗೆ ಓದಿದ್ದು' ಅಂತ ನಾವು ನಾವೇ ಅಂದುಕೊಂಡು ನಗ್ತಿದ್ವಿ. ಬೆಳಗ್ಗೆ ಆರು ಗಂಟೆಗೆ, PT ಸರ್ ಬಂದು ಎಚ್ಚರಿಸಲು ರೂಮಿನ ಬಾಗಿಲು ಮುರಿದು ಹೋಗುವಂತೆ ಬಾರಿಸುತ್ತಿದ್ರು - ನಾವು ಒಮ್ಮೊಮ್ಮೆ ಎಚ್ಚರವಾಗಿದ್ರೂ ಬಾಗಿಲು ತೆರೀತಾಯಿರ್ಲಿಲ್ಲ (PT ಸರ್ ಬಂದು ಎಚ್ಚರಿಸೋದು exam time offer !!). ರೂಮಿನ ಬಾಗಿಲನ್ನ ಸ್ವಲ್ಪವೇ ಸ್ವಲ್ಪ ತೆರೆದು ಒಳಗಡೆಯಿಂದ ಕದದ ಮೇಲೆ ನಮ್ಮ ಶೂಗಳನ್ನ ಇಡುತ್ತಿದ್ದೆವು, ಯಾರಾದರು ಬಾಗಿಲು ತಳ್ಳಿಕೊಂಡು ಒಳ ಬಂದರೆ ಅವರ ತಲೆ ಮೇಲೆ 'ಶೂ' ಅಭಿಷೇಕ. ಒಮ್ಮೆಮ್ಮೆ ವಾರ್ಡನ್ ಗಳ ತಲೆ ಮೇಲೆ ಬಿದ್ದಿದ್ದವು - ಆಗ ನಮ್ಮ ಗತಿ ಏನಾಗಿರಬಹುದು?
ನೀವು ಊಹೆ ಮಾಡ್ತೀರ ಅನ್ಕೊಂಡಿದೀನಿ . . . . ನಾವು ಮಾಡಿದ್ದು ಒಂದೇ ಎರಡೇ?

ಎಲ್ಲಿದ್ದಾರೋ, ಹೇಗಿದ್ದಾರೋ ತಿಳುವಳಿಕೆ ಹೇಳಿ, ಓದು - ಬರಹ ಕಲಿಸಿಕೊಟ್ಟು,
'may god bless you' - 'wish you all the best for you future' ಅಂತ ಮನಸಿನಿಂದ ಹಾರೈಸಿ ನಮ್ಮನ್ನ ಶಾಲೆಯಿಂದ ಕಳಿಸಿಕೊಟ್ಟ :
ಗುರುಗಳು, ಸಹಿಸಿಕೊಂಡ ವಾರ್ಡನ್ ಗಳು- ಅಡುಗೆ ಭಟ್ಟರು, 'ಈಗ ಬ್ಯಾಡ ಆಮೇಲೆ ಬರ್ರಿ ಪ್ರಿನ್ಸಿಪಾಲ್ ಗರಂ ಆಗ್ಯಾರ' ಅಂತ ಹೇಳಿ ಕಳಿಸುತ್ತಿದ್ದ ಪಿವನ್, ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ಬಾಗಿಲು ಬಡಿಯುತ್ತಿದ್ದ ಸೆಕ್ಯುರಿಟಿ ಗಾರ್ಡ್, ರಾತ್ರಿ ಕಂಪೌಂಡಿನ ಹೊರಗೆ ತಳ್ಳುಗಾಡಿಯಲ್ಲಿ ಅಂಗಡಿ ಇಟ್ಟುಕೊಂಡು, ಒಳಗೆ ಇರುತ್ತಿದ್ದ ನಮಗೆ ಪಲಾವ್, ಆಮ್ಲೆಟ್, ಎಗ್ ರೈಸ್ ಪಾರ್ಸಲ್ ಕೊಡುತ್ತಿದ್ದ ಆತನ ಹೆಸರೇನು ? ಇಲ್ಲ ನೆನಪಿಲ್ಲ, ಅಸಲಿಗೆ ನಾವು ಕೇಳಿಯೇ ಇಲ್ಲ. ಎಲ್ಲವನ್ನ ಜೊತೆಗೆ ಸಂಬ್ರಮಿಸಿದ ಗೆಳೆಯರು. ಎಲ್ಲೇ ಇದ್ದರೂ, ಎಲ್ಲರು ಚೆನ್ನಾಗಿರಲಿ.

ಹೇಳುತ್ತಾ ಹೋದರೆ ಇದು ಮುಗಿಯುವ ಮಾತ? ಖಂಡಿತ ಅಲ್ಲ.
ಅಪ್ಪ-ಅಮ್ಮ, ಶಾಲೆಯಲ್ಲಿ ಕಲಿಸಿದ ಟೀಚರ್ಸ್ , ತಿಳಿದೋ - ತಿಳಿಯದೋ ಏನನ್ನೋ ಕಲಿಸಿಕೊಟ್ಟ ಅಪರಿಚಿತರು ಮತ್ತು ಪರಿಚಿತರು ಹಾಗು ದಿನ ದಿನವೂ ಹೊಸದನ್ನ ತೋರಿಸುವ, ಕಲಿಸುವ ಇಷ್ಟು ಚಂದದ ಬದುಕು - ಈ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನದಂದು ಗೌರವದಿಂದ ನಮಿಸುತ್ತೇನೆ.
"ಕಲಿಯುವವರಿಗೆ ತಕ್ಕ ಗುರು ಸಿಗಲಿ - ಗುರುವಿಗೆ ತಕ್ಕ ವಿದ್ಯಾರ್ಥಿ ಸಿಗಲಿ" ಎನ್ನುವುದಷ್ಟೇ ಪ್ರಾರ್ಥನೆ.
(ಅದೆಷ್ಟೋ ಮರೆಯದೆ ಉಳಿದ ನೆನಪುಗಳಲ್ಲಿ ಇದೂ ಒಂದು)
=====
=====

Aug 23, 2011

ಕಾದಿದ್ದು ಬರೋಬ್ಬರಿ ಅರ್ಧ ಶತಮಾನ !!

ರಣ ಬಿಸಿಲಿನ ಬಳ್ಳಾರಿಯಲ್ಲಿ ತಣ್ಣಗೆ ಎರಡು ಯೌವನದ ಎದೆಗಳ ನಡುವೆ ಪ್ರೇಮವೊಂದು ಮೊಳಕೆಯೋಡೆದಿತ್ತು.
ತುಂಡು ಲಂಗದ ಅವಳನ್ನ, ಪಾಪದ ಗರ್ಭದಿಂದ ಹುಟ್ಟಿದ ಚಲಪತಿ ಅದಿನ್ಯಾವ ಮಟ್ಟಿಗೆ ಪ್ರೀತಿಸಿದನೆಂದರೆ ಊಟ, ನಿದ್ದೆ , ಕೆಲಸ ಉಹುಂ ಯಾವುದೆಂದರೆ ಯಾವುದು ಕೂಡ ಅವನತ್ತ
ಸುಳಿಯಗೊಡಲಿಲ್ಲ . ಪತ್ರಗಳು ಅವ್ಯಾಹತವಾಗಿ ಹರಿದಾಡಿದವು. ಅವಳನ್ನ ತನ್ನ ಮಗ ಈ ಪರಿ ಪ್ರೀತಿಸುವುದನ್ನ ಕಂಡ ಚಲಪತಿಯ ತಾಯಿಯೇ "ಇಷ್ಟೊಂದು ಪ್ರೀತಿಸಬೇಡ ಮಗನೆ, ಯಾವ ಹೆಣ್ಣೂ ಇಷ್ಟು ಪ್ರೀತಿಗೆ ಅರ್ಹಳಲ್ಲ" ಅಂತ ಹೇಳುತ್ತಾಳೆ. ಆದ್ರೆ, ಅವನ ತಲೆಯ ಮೇಲೆ ಪ್ರೇಮದ ಭೂತಸವಾರಿ.

ಮುಂದುವರಿದ ದಿನಗಳಲ್ಲಿ ಆ ಹುಡುಗಿ ಚಲಪತಿಯನ್ನ ವಿನಾಕಾರಣ ದೂರಮಾಡ್ತಾಳೆ, ಬೇರೊಬ್ಬನೊಂದಿಗೆ ಮದುವೆ ಆಗ್ತಾಳೆ. ಆಗಲೇ ಚಲಪತಿ ಅವಳ ಗಂಡನ ಸಾವಿಗಾಗಿ ಕಾಯಲಾರಂಭಿಸುತ್ತಾನೆ !!

ಕಾಯುತ್ತಾ ಕಾಯುತ್ತಾ ತಾನೂ ಬೆಳೆಯುತ್ತಾನೆ - ಸಾಮಾಜಿಕವಾಗಿ, ಆರ್ಥಿಕವಾಗಿ; ಮುಂದೆಂದೋ ಒಂದು ದಿನ ಅವಳು ತನ್ನತ್ತ ಬಂದಾಗ ಯಾವುದೇ ಕೊರತೆ ಕಾಣಬಾರದಲ್ಲ ಅದಕ್ಕೆ. ತನ್ನ ಮಗ ಅವಳನ್ನಲ್ಲದೆ ಬೇರೆ ಯಾರನ್ನೂ ಮದುವೆಯಾಗಲಾರ ಅಂತ ಚಲಪತಿಯ ತಾಯಿಗೆ ಮನವರಿಕೆಯಾಗಿರೂತ್ತೆ. ಹಾಗಾಗಿ ಆಕೆ, ಮಗ ಚಲಪತಿ ದೈಹಿಕ ಸುಖವಾದರೂ ಪಡೆಯಲಿ ಅಂತ ಒಬ್ಬ ವಿಧವೆಯನ್ನ ಒಪ್ಪಿಸುತ್ತಾಳೆ - ಆ ವಿಧವೆಗೂ ಅದರಿಂದ ಲಾಭವಿರುತ್ತೆ. ಚಲಪತಿ ದೈಹಿಕ ಕ್ರಿಯೆಯಲ್ಲಿ ತೊಡಗುತ್ತಾನೆ ಕೂಡ -ಒಂದೆರಡು ಬಾರಿ. ತಾಯಿಯೇ ಮಗನ ದೈಹಿಕ ಸುಖಕ್ಕಾಗಿ ಪರಧರ್ಮದ ವಿಧವೆಯನ್ನ ತನ್ನ ಮನೆಯಲ್ಲೇ ಮಲಗಿಸುವ ಕೆಲಸ ಮಾತ್ರ ಒಂದು ತೆರನಾದ ಕಂಪನ ಉಂಟು ಮಾಡುತ್ತೆ.

ದಿನಗಳು ಉರುಳತ್ತಲೇ ಇರುತ್ತವೆ, ಮುಪ್ಪು ಮರೆಯಲ್ಲಿ ನಿಂತು ಹೊಂಚು ಹಾಕಿ ಕುಳಿತಿರುತ್ತೆ. ಚಲಪತಿ ತನ್ನನ್ನ ತಿರಸ್ಕರಿಸಿದ ಹುಡುಗಿಯ ಸಲುವಾಗಿ ಕಾಯುತ್ತಲೇ ಇರುತ್ತಾನೆ. ತನ್ನೊಳಗಿನ ನೋವನ್ನ ಯಾರಿಗಾದರೂ ಹೇಳಲು ಅವನಿಗಾಗುವುದಿಲ್ಲ. ಎಲ್ಲಾ ತಿಳಿದ ಅವನ ತಾಯಿಯೂ ಸತ್ತುಹೊಗುವಳು. ಆಗಲೇ ಚಲಪತಿಗೆ ಅನಿಸುವುದು 'ಬಾಲ್ಯ ಮತ್ತು ಯೌವನ ಮುಗಿದವು' ಅಂತ.

ಚಲಪತಿಯ ಪ್ರೇಮದೇವತೆ ತನ್ನದೇ ಸಂಸಾರ, ಪ್ರತಿಷ್ಠೆ, ಗೌರವ ಎಲ್ಲವನ್ನ ಅನುಭವಿಸುವಾಗ ತನ್ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಚಲಪತಿ ಆಕೆಗೆ ನೆನಪೇ ಆಗುವುದಿಲ್ಲ. ತನ್ನದು ತಪ್ಪು ಅಂತ ಒಪ್ಪಲು ಅವಳ ಅಹಂ ಅಡ್ಡಿಪದಿಸುತ್ತೆ. ಚಲಪತಿ ಒಬ್ಬ ಅಸ್ತಿತ್ವದಲ್ಲೇ ಇಲ್ಲದವನು, ಅವನು ಕೇವಲ ನೆರಳು ಮಾತ್ರ ಅಂದುಕೊಂಡಿರುತ್ತಾಳೆ.

ಒಂದು ದಿನ ಚಲಪತಿಗೆ ಸುದ್ದಿ ಬರುತ್ತೆ, ಅವನ ಪ್ರೀತಿಯ ಹುಡುಗಿಯ ಗಂಡ ಕೊನೆಯುಸಿರೆಳೆದ ಸುದ್ದಿಯದು. ಕೊನೆಗೂ ಚಲಪತಿ ಕಾಯುತ್ತಿದ್ದ ದಿನ ಬಂದಿತ್ತು. ಅವಳ ಗಂಡ ಸತ್ತು ಇನ್ನೂ ದಿನಗಳೇ ಕಳೆದಿರಲಿಲ್ಲ ಆಗ ಮತ್ತೊಮ್ಮೆ ಚಲಪತಿ, ಆಕೆಯ ಮುಂದೆ ನಿಂತು ಇನ್ನೂ ಜೀವಂತವಾಗಿರುವ ತನ್ನ ಪ್ರೇಮ ತೋಡಿಕೊಳ್ಳುತ್ತಾನೆ -ಬರೋಬ್ಬರಿ ಅರ್ಧಶತಮಾನಗಳ ನಂತರ !!!
ಪ್ರೇಮ ಮತ್ತು ಮುಪ್ಪು ಎರಡೂ ನಿರ್ಲಜ್ಜತೆಗೆ ದೂಡುತ್ತವೆ.

ಮುಪ್ಪಿನಲ್ಲಿ ಮತ್ತೆ ಪತ್ರಗಳು ಶುರುವಾಗುತ್ತವೆ.
ಆ ಪಕ್ವ ಹೃದಯಗಳ ಆಂತರ್ಯದಲ್ಲಿ ಮಾತಿಗೆ ಮೀರಿದ ಪ್ರೀತಿಯೊಂದು ಮಡುವುಗಟ್ಟಿ ನಿಂತಿತ್ತು . ಅಲ್ಲಿಗೆ ಮುಗಿಯುತ್ತೆ ಕಥೆ. ಎಪ್ಪತ್ತು ವಯಸ್ಸು ದಾಟಿದ ಅವರಿಬ್ಬರೂ ಒಂದಾದರೋ ಇಲ್ಲವೊ ನೀವೇ ಓದಿ ತಿಳಿಯಬೇಕು. ಚಲಪತಿಯನ್ನ ಅರ್ಧ ಶತಮಾನ ಕಾಯುವಂತೆ ಮಾಡಿದವಳ ಹೆಸರು "ಮಾಂಡೋವಿ".

'ರವಿ ಬೆಳಗೆರೆ' ಯವರ ಕಾದಂಬರಿಯಿದು 'ಮಾಂಡೋವಿ'. ಒಂದು ಬೇರೆಯದೇ ಭಾವವನ್ನುಂಟುಮಾಡುವ, ಅಲೆಯೆಬ್ಬಿಸುವ ಕಾದಂಬರಿ. ಓದದಿದ್ದರೆ ನೀವು ಓದಬೇಕು. ಮಾಂಡೋವಿ ಖಂಡಿತವಾಗಿ ಹತ್ತಿರವಾಗ್ತಾಳೆ, ಏಕಾಂತದಲ್ಲಿ ನೆನಪಾಗುತ್ತಾಳೆ. ಮಾಂಡೋವಿ (ಗೋವಾ ರಾಜ್ಯದ ಪ್ರಮುಖ ನದಿಯ ಹೆಸರು) ನಿಲ್ಲದೆ ಹರಿಯುತ್ತಾಳೆ. ಲೇಖಕ ರವಿ ಬೆಳಗೆರೆಯವರು ಸಮರ್ಥವಾಗಿ ಮಾಂಡೋವಿಯನ್ನ ತೋರಿಸುತ್ತಾ ಕೆಲವೇ ಜನ ಅನುಭವಿಸುವ ಪ್ರೇಮದ ಇನ್ನೊಂದು ಮಗ್ಗುಲನ್ನ ತೆರೆದಿಡುತ್ತಾರೆ.

ಮಾಂಡೋವಿ, ಪ್ರಖ್ಯಾತ ಲೇಖಕ
'ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್' (Gabriel José de la Concordia García Márquez) ಅವರ 'ಲವ್ ಇನ್ ದ ಟೈಮ್ ಆಫ್ ಕಾಲರ' ಕಾದಂಬರಿಯ ಪ್ರೇರಣೆ.

ಸೂಚನೆ :: ಇದು 'ಮಾಂಡೋವಿ'ಯ ವಿಶ್ಲೇಷಣೆ, ವಿಮರ್ಶೆ ಅಥವಾ ಇನ್ಯಾವುದೋ ರೀತಿಯ ತರ್ಕಗಳಿಗೆ ನೇತಾಡುವ ಬರಹವಲ್ಲ.
ಇದೊಂದು ಕೇವಲ ಕಾದಂಬರಿಯನ್ನ ಪರಿಚಯಿಸುವ ಪ್ರಯತ್ನ ಅಷ್ಟೇ.

=====
=====


Aug 11, 2011

"ಎಲ್ಲರು ಕುಡುಕರಲ್ಲ . . . !!"

'ಬಾರ್' ಗೆ ಬಂದವರನ್ನೆಲ್ಲಾ ಕುಡುಕರೆಂದರೆ ಜೋಕೆ !!
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು

ತೀರ್ಥಕ್ಷೆತ್ರದಲ್ಲಿ ಕುಡಿದು, ಒಂದು ಗ್ಲಾಸನ್ನೋ ಬಾಟಲಿಯನ್ನೋ
ಟೇಬಲ್ಲಿಗೆ ಕುಟ್ಟಿ ಎದ್ದು ಹೋಗುವನು ಕುಡುಕನಲ್ಲ !!!
ಇಡೀ ಕುಡುಕ ಸಂತತಿಗೆ ಅವನು - ಅವಮಾನ, ಅಸಹ್ಯ
ನೇರವಾಗಿ ಮನೆಗೆ ಹೋದರಂತೂ, ಧರ್ಮದ್ರೋಹಿ

ಕುಡಿದು ಕುಡಿದು ಕುಡಿಯುತ್ತಲೇ ತೇಲಾಡುತ್ತಾ, ಓಲಾಡುತ್ತಾ,
ಹಾಡುತ್ತಾ ಆಯಾ ತಪ್ಪಿ ಬಿದ್ದು, ಆದ ನೋವನ್ನು ಮರೆಯಲು ಔಷಧಿಗಾಗಿ
ತಿರುಗಿ ಮದಿರಾಲಯಕ್ಕೆ ಬಂದು, ವಾಸ್ತು ಪ್ರಕಾರ ಟೇಬಲ್ಲು ಹುಡುಕಿ ಕೂತು
ಟಿಪ್ಸ್ ಹಣವನ್ನ ಮೊದಲೇ ಕೊಟ್ಟು, ಉಳಿದ ಹಣ ಮುಗಿಯುವ ತನಕ
"ಒಂದು ಲಾರ್ಜ್" ಅಂತಾನಲ್ಲ ಅವನು, ಸಾಕ್ಷಾತ್ ನಿಜ ಕುಡುಕ - ಕುಡುಕ ಚಕ್ರವರ್ತಿ

ಕುಡುಕರೆಂದರೆನು ಕಡಿಮೆಯೇ ? ಉಹುಂ !!
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು
=====
=====

Jul 31, 2011

"Me, ಅವಳು ಮತ್ತು ನನ್ನ ಕವಿತೆ"

ಓದಿನ ಸಲುವಾಗಿ ಊರು ಬಿಟ್ಟು ಹನ್ನೊಂದು ವರ್ಷದ ಮೇಲಾಯ್ತು. ಪ್ರೈಮರಿ ಸ್ಕೂಲ್ ಕೂಡ ಬೇರೆ ಊರಲ್ಲಿ ಓದಿದ್ದು ಆದ್ರೆ ನನ್ನ ಊರಿಗೆ ಹತ್ರ ಇತ್ತು. ಇಷ್ಟು ವರ್ಷ ಊರಿಂದ ಊರಿಗೆ ಸೈಕಲ್, ಆಟೋ, ಕುದುರೆಗಾಡಿ(ಜಟಕಾಬಂಡಿ), ದೋಣಿ, ಬಸ್ಸು,ಕಾರು, ರೈಲು ಮತ್ತು ವಿಮಾನ, ಈ ಎಲ್ಲಾ ಸಂಚಾರಿ ವಾಹನಗಳಲ್ಲಿ ತಿರುಗಾಡಿದಿನಿ. ದುರಂತ ಅಂದ್ರೆ ಇಷ್ಟು ವರ್ಷಗಳ ಪ್ರಯಾಣದಲ್ಲಿ ಒಮ್ಮೆ ಕೂಡ ಅಪರಿಚಿತ, ಚಂದದ ಹುಡುಗಿ ನನ್ನ ಪಕ್ಕ ಕೂತಿಲ್ಲ ಮತ್ತು ನಾನು ಅಂಥವಳ ಪಕ್ಕ ಕೂತಿಲ್ಲ. ಚಂದದ ಹುಡುಗಿ ಅಲ್ಲ ಬರೀ ಹುಡುಗಿ ಕೂಡ ಕೂತಿಲ್ಲ. ಕಾರಣ ಗೊತ್ತಿಲ್ಲ (ನಾನು ಸ್ವಲ್ಪ ಕಪ್ಪು).

ಸುಮಾರು ತಿಂಗಳಗಳ ನಂತರ ಧಾರವಾಡಕ್ಕೆ ಹೋಗ್ತಾಯಿದ್ದೆ ಬೆಂಗಳೂರಿನಿಂದ. ಜನಶತಾಬ್ಧಿ ರೈಲಿನಲ್ಲಿ ಹುಬ್ಬಳ್ಳಿವರೆಗೆ ಹೋಗಬೇಕಾಗಿತ್ತು, ಅದರ ಟೈಮಿಂಗ್ ಬೆಳಗ್ಗೆ 6:00 am. ನನಗೆ ಸುಪ್ರಬಾತ ಕೇಳಿಸೋದು early morning 8:00 am. ನನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತು ಅದಕ್ಕೆ reservation ಮಾಡ್ಸಿರ್ಲಿಲ್ಲ. ಪಾಪ, ರೈಲಿಗೆ ಅದೃಷ್ಟ ಇರ್ಲಿಲ್ವೋ ಅಥವಾ ನನ್ನ ಪಕ್ಕ ಕೂತ್ಕೋಳೊ ಹುಡುಗಿ ಇನ್ನು ರೆಡಿ ಆಗಿರ್ಲಿಲ್ವೋ ಏನೋ ಒಟ್ನಲ್ಲಿ ನಾನಂತೂ ಜನಶತಾಬ್ಧಿಗೆ ಹೋಗಲಿಲ್ಲ.

ಚಿಕ್ಕವರಿದ್ದಾಗ ದೇವರ ಮುಂದೆ ನಿಂತು ಭಕ್ತಿಯಿಂದ ನಮಸ್ಕಾರ, ಪ್ರಾರ್ಥನೆ ಇತ್ಯಾದಿ, ಇತ್ಯಾದಿಗಳನ್ನ ಮಾಡ್ಬೇಕು ಅಂತ ಮನೇಲಿ ಹೇಳೋರು ಅದನ್ನೇ ಈಗ ಕೂಡ ಮಾಡ್ತೀನಿ. ಆದ್ರೆ, ಈಗಿನ ಮಸಲತ್ತು ಬ್ಯಾರೆ. ಸಿಲಿಕಾನ್ ಸಿಟಿಯ BTM layout ನಲ್ಲಿರುವ ರೂಮು ಬಿಡುವಾಗಲೇ ದೇವರ ಮುಂದೆ ನಿಂತು ಭಕ್ತಿಯಿಂದ "ಇವತ್ತಾದರೂ ಚಂದದ ಹುಡುಗಿ ನನ್ನ ಪಕ್ಕ ಕೂತ್ಕೊಳೋ ಹಾಗೆ ಮಾಡಪ್ಪ/ ಮಾಡಮ್ಮ" ಅಂತ ಬೇಡ್ಕೊಂಡೆ.

ಬೆಂಗಳೂರು ರೈಲ್ವೆ ಸ್ಟೇಷನ್ನಿನ ಆ platform ನಲ್ಲಿ ಚಿಯಾ-ಮಿಯಾಗಳಿಂದ ಹಿಡಿದು ಇನ್ನೇನು validity ಮುಗಿಯಲಿರುವ ಎಲ್ಲಾ ವಯಸ್ಸಿನವರು 'ತ್ರಿಪುರ ಸುಂದರಿ'ಯನ್ನ ಕಾಯುವಂತೆ ಕಾಯುತ್ತಿದ್ದರು. ಆಗಾಗ, ನಿಂತವರು ಸೊಂಟದ ಮೇಲಿನ ಭಾಗವನ್ನ ಡೊಂಕಿಸಿ ನೋಡುತ್ತಿದ್ದರು, ಬೆಂಚಿನ ಮೇಲೆ ಕೂತವರು ಕೂತಲ್ಲೇ ನೋಡುವ ಪ್ರಯತ್ನ ಮಾಡುತ್ತಿದ್ದರು (ಎದ್ದರೆ ಮತ್ತೆ ಜಾಗ ಸಿಗುವ ಚಾನ್ಸ್ ಕಡಿಮೆ ಅದಕ್ಕೆ). ಒಟ್ಟಾರೆ 'Bangalore-Dharwad Intercity Express' ಎನ್ನುವ ತ್ರಿಲೋಕ ಸುಂದರಿಗಾಗಿ ಭಯಂಕರ ಕಾಯುವಿಕೆ. ಕೆಲವರು ಅದಾಗಲೇ ಪೇಪರ್, ಸಣ್ಣ ಸಣ್ಣ ಬ್ಯಾಗುಗಳನ್ನ ಕಿಡಕಿಯಿಂದ ಎಸೆದು ಸೀಟು ಪಕ್ಕ ಮಾಡ್ಕೊಬೇಕು ಅಂತ ತಯಾರಾಗಿದ್ದರು. ನಾನು ಆ ಪ್ಲ್ಯಾಟ್ಫಾರ್ಮ್ ಗೆ ಹೋಗಿ ಹದಿನೇಳು ನಿಮಿಷಗಳ ನಂತರ ಬಂದಳು ಸುಂದರಿ ಧಡಕ್-ಬಡಕ್, ಧಡಕ್-ಬಡಕ್, . . . . Intercity Express.

ಮೊದಲ ಬಾರಿ ಕಂಪಿಸಿತು ರೈಲು ::
ನಾನು ಆರಾಮಾಗಿ ಹತ್ತಿದೆ ಯಾಕಂದ್ರೆ ಸೀಟು ಸಿಗೋದು ಖಾತ್ರಿಯಿರ್ಲಿಲ್ಲ, ಅದಕ್ಯಾಕ ಗುದ್ದಾಡ್ಕೊಂಡು ಹತ್ತೋದು. ರೈಲಿನಲ್ಲೂ ಒಂದೇ ಕಡೆ ಕೂತು ಪ್ರಯಾಣ ಮಾಡೋನು ಟೆಸ್ಟ್ ಲೆಸ್ ಫೆಲೋ. ಸೀಟು ಹಿಡಿದು ಒಂದೇ ಕಡೆ ಕೂತ್ಕೊಬೇಕು ಅಂದ್ರೆ ಬಸ್ಸಿಗೆ ಹೋಗಬಹುದಲ್ವಾ ?. ಆದ್ರೂ, ಪಕ್ಕದ ಸೀಟಿನಲ್ಲಿ ಯಾರು ಕೂತ್ಕೋತಾರೆ ಅನ್ನೋ ಹುಳ ತಲೇಲಿ ಇತ್ತಲ್ಲ ಅದಕ್ಕೆ ಒಮ್ಮೆ ಕಣ್ಣಾಡಿಸಿದೆ. ಖಾಲಿ ಸೀಟು ಕಂಡಿತು, ನೋಡಿದ್ರೆ ಕಿಡಕಿ ಸೀಟಿಗೆ ಯಾರೋ ಪೇಪರ್ ಇಟ್ಟಿದ್ರು 'ಛೆ' ಅಂದುಕೊಂಡು ಅದೇ ಸೀಟಿನ ತುದಿಗೆ ಕೂತು ಎದುರುಗಡೆ ನೋಡಿದೆ. ಗುಬ್ಬಚ್ಚಿ ಕಂಡಂಗೆ ಹೆಣ್ಣು ಪ್ರಾಣಿಯೊಂದು ಕಿಡಿಕಿ ಸೀಟಿನಲ್ಲಿ ಕಂಡಿತು ಮತ್ತೆ 'ಛೆ' ಅಂದುಕೊಂಡೆ ಯಾಕಂದ್ರೆ ಅವಳ ಪಕ್ಕದಲ್ಲಿ ಯಾರೋ ಪೇಪರ್, ಬ್ಯಾಗು ಇಟ್ಟಿದ್ರು. 'ದೇವ್ರೇ ಪಕ್ಕದಲ್ಲಿ ಕೇಳಿದ್ರೆ ಎದುರುಗಡೆ ಕೊಡ್ತಿಯಲ್ಲ' ಅಂತ ನನ್ನೊಳೋಗೆ ಹೇಳಿಕೊಳ್ಳುವಾಗಲೇ ಒಬ್ಬ ಅಂಕಲ್ ಬಂದು 'ನಾನಿಲ್ಲಿ ಸೀಟು ಹಾಕಿದಿನಮ್ಮ' ಅಂದ್ರು.

That girl shifted to window side of my seat, ಅವಾಗ್ಲೇ ನನಗೆ ಗೊತ್ತಾಗಿದ್ದು ಅದು,paper, ಯಾರೋ ಸೀಟಿಗೆ ಹಾಕಿದ್ದಲ್ಲ ಮರೆತು ಬಿಟ್ಟಿರೋದು ಅಂತ. 'ಅನ್ಯಾಯವಾಗಿ ಕಿಡಕಿ ಸೀಟು miss ಆಯ್ತಲ್ಲ. ಹೋಗ್ಲಿ ಬಿಡು ಮಿಸ್ ಆದ್ರೆ ಏನಂತೆ ಚಂದದ 'ಮಿಸ್' ಗೆ ಪಾಸ್ ಆಗಿದೆಯಲ್ಲ' ಅಂದ್ಕೊಂಡೆ. ನಮ್ಮಿಬ್ಬರ ಮಧ್ಯೆ ಇನ್ನೂ ಒಬ್ಬರು ಕೂತ್ಕೊಳ್ಳುವಷ್ಟು ಜಾಗ ಖಾಲಿಯಿತ್ತು, ಈಗದನ್ನ ಮಾಯಾ ಮಾಡಬೇಕಿತ್ತು. ಯಾರಾದ್ರು ಬಂದು 'ಸ್ವಲ್ಪ ಆ ಕಡೆ ಸರೀರಿ' ಅಂತಾರೆ ಅಂತ expect ಮಾಡಿದ್ದೆ.

ಅಷ್ಟರಲ್ಲಿ ಒಂದು ಹುಡುಗ ಬಂದು 'I got it, I got it' ಅನ್ನುತ್ತಾ ಎರಡು ಪ್ಲಾಷ್ಟಿಕ್ ಕ್ಯಾರಿ ಬ್ಯಾಗುಗಳನ್ನ ಆ ಹುಡುಗಿಗೆ ತೋರಿಸಿ, ನಗುತ್ತ ನಮ್ಮಿಬ್ಬರ ನಡುವೆ ಕೂತ್ಕೊಂಡ, ಏನೋ ಸಾಧನೆ ಮಾಡಿರೋನ ತರಾ, ಕರಡಿ ನನ್ಮಗ- ಶಿವ ಪೂಜೆಯಲ್ಲಿ. I don't know what was there in those bags. ಅವರಿಬ್ಬರೂ ಕಲ್ಲಿಗೆ ಕಣ್ಣೀರು ಬರೋ ಹಾಗೆ ವಟ ವಟ ಅಂತ ಮಾತಾಡೋಕೆ ಶುರುಮಾಡಿದ್ರು, and that guy ಮಾತಿನ ನಡುನಡುವೆ ನಗ್ತಿದ್ದ, ಕಳ್ಳ. ಮಾತು ಮಾತಲ್ಲಿ ಗೊತ್ತಗಿದ್ದೆನಂದ್ರೆ she is from Dharwad and ಅವ್ರು siblings ಅಲ್ಲ. then Lovers? -ನಾನು ಅಷ್ಟು ಕೆಟ್ಟದ್ದನ್ನ ಯೋಚನೆ ಮಾಡಲ್ಲ because It hurts me, ಅಥವಾ just Friends - May be. ನನಗಂತೂ ಮೈಯಲ್ಲ ಬೆಂಕಿ, ಇವನೇ ನನ್ನ ಮೊದಲ ಶತ್ರು ಅಂತ declare ಮಾಡಿದೆ. ದೇವರನ್ನ ಅದೆಷ್ಟು ಬೈದುಕೊಂಡೆನೋ ಏನೋ, ರೈಲು ನಿಂತಲ್ಲೇ ಒಮ್ಮೆ ಕಂಪಿಸಿತು. ಆಮೇಲೆ ಹೊರಟಿತು !!

She and My Poem ::
ಆ ಹುಡುಗ ಯಶವಂತಪುರದಲ್ಲಿ ಇಳಿದ - 'ಖದೀಮ, ಇವಳನ್ನ ರೈಲು ಹತ್ಸಲಿಕ್ಕೆ ಮೆಜೆಸ್ಟಿಕ್ ತನಕ ಬಂದಿದಾನೆ. ಅದೆಷ್ಟು ರೈಲು ಹತ್ತಿಸಿದ್ನೋ ಏನೋ, ಇವ್ಳು ಎಷ್ಟು ನಂಬಿದ್ಲೋ ಏನೋ' ಅನ್ಕೊಂಡೆ. ಯಾರೋ ಬಂದ ಹಾಗಾಯ್ತು ಅವರು ಸೀಟು ಕೇಳುವ ಮೊದ್ಲೇ ನಾನೇ ಸರ್ರನೆ ಕಿಡಕಿ ಸುಂದರಿ ಕಡೆ ಜಾರಿ, ದಾನವೀರ ಶೂರ ಕರ್ಣನಾದೆ. ನನಗೆ ಎಷ್ಟೋ ವರ್ಷಗಳನ್ನ ಕೂತಲ್ಲೇ ಕಳೆದಂಗಾಗಿತ್ತು, ಈಗ ಒಂಥಾರ ನಿರಾಳ. ರೈಲು ತನ್ನ ಪಾಡಿಗೆ ತಾನು ಹೊರಟಿತ್ತು. ದೇವ್ರೇ ಕೊನೆಗೂ ಕಣ್ಣು ಬಿಟ್ಟಲ್ಲಪ್ಪ- ಹುಡುಗಿ ನನ್ನ ಪಕ್ಕ ಬಂದ್ರು, ನಾನು ಹುಡುಗಿ ಪಕ್ಕ ಹೋದರು ಒಂದೇ, ಅಲ್ವಾ?

ಈಗ ಮಾತಾಡ್ತಾಳೆ ಆಗ ಮಾತಾಡ್ತಾಳೆ ಕಾಯ್ತಾಯಿದ್ದೆ ನನ್ನ ಬ್ಯಾಗಿನಲ್ಲಿದ್ದ ಎರಡು ಪುಸ್ತಕಗಳಲ್ಲಿ ಒಂದು ಕನ್ನಡ ಕಾದಂಬರಿ ಇತ್ತು. ನಾನು ಹುಡುಗಿ ಮುಂದೆ, ಸ್ವಲ್ಪ ಬಿಲ್ಡ್ ಅಪ್ ಇರ್ಲಿ ಅಂತ ಇಂಗ್ಲೀಷ್ ಕಾದಂಬರಿ ಎತ್ಕೊಂಡೆ. ಕಾಯ್ತೀನಿ ಕಾಯ್ತೀನಿ ಉಹುಂ ಮೇಡಂ ಮಾತಾಡೋ ಯಾವ symptoms ತೋರ್ತಾಯಿಲ್ಲ. ಕಾದಂಬರಿಯ ಮೊದಲ ಪುಟ ಕೂಡ ಓದಿರಲಿಲ್ಲ, ಸುಮ್ನೆ ಪೇಜ್ ತಿರುವುತ್ತಿದ್ದೆ. ಮಾತಿನಲ್ಲಿ ನನ್ನದೋ ಭಯಂಕರ starting trouble . ಅವಳದು ಅದೇ ಪ್ರಾಬ್ಲಂ ಇರಬಹುದಾ? ಗೊತ್ತಿಲ್ಲ. ಕೆಲವು ತಾಸುಗಳು ಕಳೆದು ಹೋದವು ಆ ಹುಡುಗಿ ಸ್ವಲ್ಪ ಹೊತ್ತು ಹಾಡು ಕೇಳಿದ್ಲು, ನಂತರ ಮಲಗಿದ್ಲು ಆಗ ಅವ್ಳು ತಲೆ ಸೀಟಿನಿಂದ ಜಾರಿ ಆಸರೆ ಪಡೆಯಲಿ ಅಂತ ನನ್ನ ಭುಜವನ್ನ ಅದಕ್ಕಾಗಿ ರೆಡಿ ಮಾಡ್ಕೊಂಡೆ. ಇನ್ನೇನು ಅವ್ಳು ತಲೆ ನನ್ನ ಭುಜದ ಮೇಲೆ ಲ್ಯಾಂಡ್ ಆಗ್ಬೇಕು - ಎಚ್ಚರ ಆಗ್ಬಿಟ್ಲು. 'ಅಯ್ಯೋ ಪಾಪಿ' ಅನ್ಕೊಂಡೆ.

ಕೈಯಲ್ಲಿದ್ದ Agatha Christie ಯವರ 'Partners in Crime' ಎಂಬ ರೋಚಕ ಕಾದಂಬರಿ ಕೂಡ ಸಪ್ಪೆ ಅನಿಸಿತು ಮತ್ತೆ ಬ್ಯಾಗಿನೋಳಗಿಟ್ಟೆ. ಸ್ವಲ್ಪ ಹೊತ್ತು ಮತ್ತೆ waiting but no use. I thought train is moving so fast, ನಂತರ ಕೊನೆ ಪ್ರಯತ್ನವೆಂಬಂತೆ ಒಂದು ಕವಿತೆ ಬರೆಯಲು ರೆಡಿಯಾದೆ. ಎಲ್ಲಾದರು, ಏನಾದ್ರೂ ವಿಷಯ ಸಿಗಬಹುದು ಅಂತ ನನ್ನ ಹತ್ತಿರ ಸದಾ ಒಂದು ಪೆನ್ನು ಮತ್ತು ಖಾಲಿ ಪೇಪರ್ ಇಟ್ಕೊಂಡಿರ್ತೀನಿ (ಅದೇ ಕಾರಣಕ್ಕೆ ಈ ಬ್ಲಾಗಿನ ಹೆಸರು 'ಪೆನ್ನುಪೇಪರ್'). To be frank, i was not cheating myself - ಮನಸಿನಿಂದ ಬರೆದೆ. ಅವಳು ಅದನ್ನ ಗಮನಿಸಿದ್ಲೋ ಇಲ್ವೋ ಗೊತ್ತಾಗ್ಲಿಲ್ಲ. ಕೊನೆಗೆ ಟೈಟಲ್ ಸ್ವಲ್ಪ ದೊಡ್ಡದಾಗಿ ಬರೆದೆ 'Saying I Love U' ಅಂತ. ಅವಳು ಗಮನಿಸಲಿ ಅಂತ I Love U ಅನ್ನೋದರ ಕೆಳಗೆ ಎರಡು ಸಲ underline ಮಾಡ್ದೆ. and Finally, NO USE.

ME and My Poem ::
ಆಮೇಲೆ ಅಲ್ಲೇ ಸುತ್ತ-ಮುತ್ತಾ ಎರಡು-ಮೂರು ಸಲ ಸೀಟು ಬದಲಾಯಿಸಿದೆ. ಈವರೆಗಿನ ನನ್ನ ರೈಲು ಪ್ರಯಾಣದಲ್ಲಿ ನಾನು ತುಂಬಾ ಹೊತ್ತು ಕೂತಲ್ಲೇ ಕೂತಿದ್ದು ಅದೇ ಮೊದಲು - only because of that girl. ಬೆಂಗಳೂರಿನಿಂದ ಧಾರವಾಡಕ್ಕೆ Intercity train ನಲ್ಲಿ ಹೋದ್ರೆ ಒಂಬತ್ತು ತಾಸು ಬೇಕಾಗುತ್ತೆ. ಆ ಒಂಬತ್ತು ತಾಸಿನಲ್ಲಿ ಸುಮಾರು ಐದು ತಾಸು ನಾನು ಅವಳ ಜೊತೆಯಲ್ಲೇ ಇದ್ದೆ (ನಡುನಡುವೆ ಸುತ್ತಾದೊದನ್ನ ಬಿಟ್ಟು). ಹುಬ್ಬಳ್ಳಿ ಬಂತು ಎಲ್ಲರು ಇಳಿದು ಹೋದರು.

ನಾನಿದ್ದ ಡಬ್ಬಿಯಲ್ಲಿ ಇದ್ದಿದ್ದು ನಾನು, ಅವಳು ಮತ್ತು ನಾನು ಅವಳಿಗೆಂದೇ ಬರೆದ ಕವಿತೆ. ನಾವಿದ್ದ ಡಬ್ಬಿಯ ಎರಡು ಕಡೆ ಡಬ್ಬಿಗಳಲ್ಲಿ ಯಾರು ಇಲ್ಲ, ಹುಬ್ಬಳ್ಳಿಯ ಸ್ಟೇಷನ್ನಿನಲ್ಲಿ ಮಸ್ತ್ ಮೌನ, ಹತ್ತು ಗಂಟೆಯತ್ತ ಸಾಗುತ್ತಿತ್ತು, ರಾತ್ರಿ. ಧಾರವಾಡಕ್ಕೆ ಹೋಗೋರು ಬಹುಶಃ ಇಡೀ ರೈಲಿನಲ್ಲಿ ಹೆಚ್ಚು ಅಂದ್ರೆ 40-50 ಜನ ಮಾತ್ರ. ಈ ಎಲ್ಲಾ ಕಾರಣಗಳಿಗೆ ಆ ಹುಡುಗಿಗೆ ಹೆದರಿಕೆಯಾಯ್ತು ಅನ್ಸುತ್ತೆ. ಮೆಲ್ಲಗೆ ಎದ್ದು 'ನೀವೂ ಧಾರವಾಡಕ್ಕೆನ್ರಿ' ಅಂದಳು ಮೌನ ಸುಂದರಿ. ಹುಡುಗಿಯರಿಗೆ ಯಾವಾಗ ಹೆದ್ರಕೆಯಾಗೊತ್ತೋ, ಯಾವಾಗ ತಮ್ಮ ಕೈಯಲ್ಲಿ ಕೆಲಸ ಆಗಲ್ಲ ಅಂತ ಗೊತ್ತಾಗುತ್ತೋ ಆಗಷ್ಟೇ ಹುಡುಗುರು ನೆನಪಾಗ್ತಾರೆ. ಅಲ್ವಾ ?. ನನಗೂ ಸಿಟ್ಟು ಬಂದಿತ್ತು ಆ ಹುಡುಗಿ ಮೇಲೆ because i was disappointed . ಅದಕ್ಕೆ ' ಇಲ್ಲ ವಾಪಾಸ್ ಬೆಂಗಳೂರಿಗೆ ಹೋಗಾಂವ ಅದೀನಿ' ಅಂತ ಅನ್ಬೇಕು ಅನ್ಸಿತ್ತು ಆದ್ರೂ ತಡ್ಕೊಂಡು 'ಹೌದು' ಅಂದೆ. ಎಷ್ಟೇ ಆಗ್ಲಿ ಗಂಡು ಜೀವ ಹೆಣ್ಣಿಗೆ ಕರಗುತ್ತೆ.

ನಾನು ರೈಲಿಳಿದು ಪ್ಲ್ಯಾಟ್ಫಾರ್ಮ್ ನಲ್ಲಿ ಸುತ್ತಾಡಿದೆ. ಆ ಹುಡುಗಿಗೆ ನನ್ನಿಂದಲೂ ಅಭಯ ಸಿಗಲಿಲ್ಲ ಅನ್ಸುತ್ತೆ ತನ್ನ ಲಗೇಜ್ ತೊಗೊಂಡು ಬೇರೆ ಡಬ್ಬಿಗೆ ಹೊರಟಳು - Yes, She moved away and ironically she was no time with me. ರೈಲು ಧಾರವಾಡಕ್ಕೆ ಹೊರಟಿತು - InterCity now more beauty for none unless it start again to Bangalore. ಉಳಿದದ್ದು ನಾನು ಮತ್ತು ಕವಿತೆ there and only there.

Destination ::
ಸ್ವಲ್ಪ ಹೊತ್ತು ಕೂತೆ, ನಾನಿದ್ದ ಡಬ್ಬಿ ಕೊನೆಯಿಂದ ಮೂರನೆಯದಾಗಿತ್ತು. ರೈಲ್ವೆ ಕಾರ್ಮಿಕರು ಹುಬ್ಬಳ್ಳಿಯಿಂದ ಕ್ಲೀನ್ ಮಾಡೋಕೆ ಶುರು ಮಾಡಿದ್ರು, ಧೂಳು ಅಡರುತ್ತಿತ್ತು. ಬ್ಯಾಗನ್ನು ಹೆಗಲಿಗೇರಿಸಿಕೊಂಡು ಒಂದೊಂದೇ ಡಬ್ಬಿಗಳನ್ನ ದಾಟಿದೆ. ಅಲ್ಲಿ ನಾಲ್ಕೈದು ಜನರಲ್ಲಿ ಆ ಹುಡುಗಿಯು ಇದ್ದಿದ್ದು ಗೊತ್ತಾಯ್ತು ಆದ್ರೆ ಹತ್ರ ಹೋದಾಗ ಅವಳ ಕಡೆ ನೋಡಲಿಲ್ಲ. ಧಾರವಾಡದಲ್ಲಿ ಮನೆಗೆ ಹೋದಾಗ ರಾತ್ರಿ ಹೊನ್ನೊಂದು ಹತ್ತಿರವಾಗಿತ್ತು. 'ಚೆನ್ನಾಗಿತ್ತಾ ಪ್ರಯಾಣ ?' ಮನೆಯಲ್ಲಿ ಸಾಮಾನ್ಯ ಪ್ರಶ್ನೆ.
'It was beautiful' ಹಾಗಂತ ಹೇಳ್ಬೇಕು ಇಲ್ಲಾಂದ್ರೆ ಸುಮ್ನೆ ಪ್ರಶ್ನೆ, ಗಾಬರಿ ಶುರುವಾಗ್ತವೆ.

ಮುಗಿಯಿತು :
ಮರುದಿನ ಬಟ್ಟೆ ತೊಳೆಯೋಕೆ ಹಾಕುವಾಗ ತಂಗಿ, ಶರ್ಟ್ ನಲ್ಲಿದ್ದ ಹಾಳೆ ನೋಡಿ ಏನೋ ಕವನ ಬರ್ದಿರ್ತಾನೆ ಅಂತ ಓದಿದಾಳೆ.
ನನ್ನಿಂದ ವಿರಚಿತ ಕವಿತೆ ತೋರಿಸಿ 'ಯಾರಿಗೋ ಪ್ರಪೋಸ್ ಮಾಡಿರೋ ಹಾಗಿದೆ' ಅಂದ್ಲು.
'yep, But no use' ಅಂದೆ
she said 'I think , You don't know how to approach'
'May be, I have not attended any classes of it' we both laughed.
'ಹೆಂಗಿದ್ಲು ?' she asked
"Beautiful" ಅನ್ನುತ್ತಾ ಬೈಕಿನ ಕಿಕ್ ಅನ್ನು ಜೋರಾಗಿಯೇ ಒದ್ದೆ.
who knows ? same 'window beauty' may ask me a lift now . hoping for the best.
=====
=====

Jul 10, 2011

"ಗಂಗೂ : ರೆಡ್ ಲೈಟ್ ನಲ್ಲಿ"

ಕಾತೆವಾಡದ ರಾಜ ಮನೆತನಕ್ಕೆ ತೀರಾ ಹತ್ತಿರದ, ತುಂಬಾ ಅನುಕೂಲಸ್ತ ಕುಟುಂಬದ ಹುಡುಗಿ ಅವಳು - ಗಂಗಾ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಷ್ಟಾಗಿ ಒತ್ತು ಕೊಡದ ಆ ಕಾಲದಲ್ಲಿ ಆಕೆ ಸ್ಕೂಲ್ ಗೆ ಹೋಗ್ತಾಯಿದ್ಲು. ಅವಳಿಗೆ ಆಸೆಯಿತ್ತು - ಸಿನಿಮಾ ನಟಿಯಾಗಬೇಕು ಅಂತ. ಒಮ್ಮೆ ಆಕೆಯ ಕ್ಲಾಸ್ ಮೇಟ್ ಮುಂಬೈ ನೋಡಿ ಬಂದವರು, ಮುಂಬೈ ಹಾಗಿದೆ ಗೊತ್ತಾ? ಹೀಗಿದೆ ಗೊತ್ತಾ? ಆಹಾ ಎಷ್ಟು ದೊಡ್ಡ ಕತ್ತದಗಲಿದಾವೆ ಗೊತ್ತಾ? ಅಂತೆಲ್ಲ ಮಾತಾಡಿದ್ರು. ಗಂಗಾಗೆ ತಾನು ಮುಂಬೈ ನೋಡಬೇಕು ಆನೋ ಆಸೆ ಹುಟ್ಟಿತು. ಸಿನಿಮಾ ನಟಿಯಾಗೊದಂತು ದೂರದ ಮಾತು ಅಂತ ಅವಳಿಗೆ ಗೊತ್ತಿತ್ತು ಯಾಕಂದ್ರೆ ಕೌಟುಂಬಿಕ ಹಿನ್ನಲೆ ಹಾಗಿತ್ತು / ದೊಡ್ಡದಿತ್ತು. ಆಗಲೇ ಗಂಗಾನ ತಂದೆ ರಮಣಿಕ್ ಹೆಸರಿನ ಹುಡುಗನನ್ನ ಕೆಲಸಕ್ಕೆ ನೆಮಿಸಿಕೊಳ್ಳುತ್ತಾರೆ, ಅವನು ಮುಂಬೈ ನೋಡಿದವನು ಅಂತ ಗೊತ್ತಾದ ಮೇಲೆ ಗಂಗಾ ಅವನಿಗೆ ಹತ್ರ ಆಗ್ತಾಳೆ. ಆತ ತನಗೆ ಸಿನಿಮಾಕ್ಕೆ ಹತ್ತಿರವಿರುವ ಸ್ನೇಹಿತರಿದ್ದಾರೆ ಅಂತ ಹೇಳ್ತಾನೆ - ಗಂಗಾ ನಂಬಿ ಬಿಡ್ತಾಳೆ.

ಇಬ್ಬರ ನಡುವೆ ಪ್ರೀತಿ ಬೆಳೆಯುತ್ತೆ. ಒಂದು ದಿನ ಒಡವೆ,ಹಣವನ್ನ ಕಟ್ಟಿಕೊಂಡು ಗಂಗಾ ರಮಣಿಕ್ ನೊಂದಿಗೆ ಮುಂಬೈಗೆ ಬರ್ತಾಳೆ. ಮನೆಯವರಿಗೆ ಒಂದೇ ಒಂದು ಚೀಟಿಯನ್ನು ಸಹ ಬರೆದಿಟ್ಟಿರಲ್ಲ.
ಅವಳು ತಂದ ಹಣದಲ್ಲಿ ಇಬ್ಬರು ಲಾಡ್ಜಿನಲ್ಲಿ ಉಳಿತಾರೆ, ಸಿಟಿ ಸುತ್ತಾಡ್ತಾರೆ, ದೈಹಿಕವಾಗಿ ಒಂದಾಗ್ತಾರೆ - ರಮಣಿಕ್ ಜೊತೆಯಾಗಿ ಸಂಸಾರ ಮಾಡೋಣ ಅಂತ ಹೇಳಿರ್ತಾನೆ. ಇನ್ನೇನು ಹಣವೆಲ್ಲ ಖಾಲಿಯಾಗ್ತಾಯಿದೆ ಅನ್ನುವಾಗ ಅವನು ಮನೆ ನೋಡ್ತೀನಿ ಅಲ್ಲಿಯವರೆಗೂ ನನ್ನ ಆಂಟಿ ಮನೆಲಿರು ಅಂತ ಹೇಳಿ ಗಂಗಾಳನ್ನ ತನ್ನ ಆಂಟಿ ಜೊತೆ ಕಳಿಸಿ. ಮನೆ ಹುಡುಕಲಿಕ್ಕೆ ಅಂತ ಹೋಗ್ತಾನೆ.


ರಮಣಿಕ್ ನ ಆಂಟಿ ಜೊತೆ ಟ್ಯಾಕ್ಸಿಯಲ್ಲಿ ಬಂದು ಗಂಗಾ ಇಳಿಯೋದು - ಮುಂಬೈ ನಗರಿಯ 'ಕಾಮಾಟಿಪುರ', ರೆಡ್ ಲೈಟ್ ಏರಿಯ!! ಗಂಗಾಗೆ ಆ ಜಾಗ ಎಂತದು ಅಂತ ಗೊತ್ತಿರಲ್ಲ. ಆದರೂ ಯಾಕೋ ಏನೋ ಸರಿಯಿಲ್ಲ ಅನಿಸುತ್ತೆ.
ಹೇಗೋ, ಇವತ್ತು ಒಂದು ದಿನ ತಾನೇ. ನಾಳೆ ನಾನು ರಮಣಿಕ್ ನ ಜೊತೆ ಹೊಸ ಮನೆಗೆ ಹೋಗ್ತೀನಿ ಅಂತ ಅನ್ಕೊತಾಳೆ, ಆದರೆ ಆಂಟಿ ಹೇಳಿದ್ದು ಕೇಳಿ ಗಂಗಾಗೆ ದಂಗುಬಡಿಯುತ್ತೆ - ರಮಣಿಕ್ ಗಂಗಾಳನ್ನ ಮಾರಾಟ ಮಾಡಿ ಹೋಗಿಬಿಟ್ಟಿರುತ್ತಾನೆ. ಇನ್ನು ಆಂಟಿ, ಆಕೆ ಆಂಟಿಯಲ್ಲ - ಘರ್ ವಾಲಿ.

ಗಂಗಾ ಜಗಳ ಮಾಡ್ತಾಳೆ, ಕಿರಿಚಾಡ್ತಾಳೆ ಅವಳಿಗೆ ಒದೆಗಳು ಬೀಳ್ತವೆ ಮತ್ತೆ ಅಳ್ತಾಳೆ. ಕೊನೆಗೆ ಎಲ್ಲಾ ರೀತಿಯಲ್ಲಿ ಯೋಚಿಸಿ ತಾನು ವೇಶ್ಯೆಯಾಗಲಿಕ್ಕೆ ತಯಾರು ಅಂತಾಳೆ - ಕಾತೆವಾಡದ ತುಂಬಾ ಅನುಕೂಲಸ್ತ ಮನೆಯ ಹುಡುಗಿ.
ಮಾರಾಟಮಾಡಿದ ರಮಣಿಕ್ ಒಂದು ವಾರ ಗಂಗಾಳನ್ನ ದೈಹಿಕಾವಾಗಿ ಉಪಯೋಗಿಸಿಕೊಂಡು, ಗಂಗಾ ಇನ್ನು ಕನ್ಯೆ ಅಂತ ಹೇಳಿ ಮಾರಾಟ ಮಾಡಿರ್ತಾನೆ. ತಾನು ಕನ್ಯೆ ಅಲ್ಲ ಅಂತ ಗಂಗಾ ಕೂಡ ಘರ್ ವಾಲಿಗೆ ಹೇಳೋದಿಲ್ಲ. ಅವಳ ಜೊತೆ ಕಾಮಾಟಿಪುರದಲ್ಲಿ ಮಲಗಿದ ಮೊದಲ ಗಂಡಸಿಗೆ ಆಕೆ ಇಷ್ಟ ಆಗ್ತಾಳೆ. ಆ ಗಂಡಸು ಎಲ್ಲಾ ಮುಗಿದ ಮೇಲೆ ನಿನ್ನ ಹೆಸರೇನು ಅಂತ ಕೇಳ್ತಾನೆ. ಸ್ವಲ್ಪ ಸುಮ್ಮನಿದ್ದು ಗಂಗಾ, 'ಗಂಗೂ' ಅಂತಾಳೆ - ಬರ್ತ್ ಆಫ್ ಪ್ರೋಷ್ಟಿಟ್ಯುಟ್. ನಂತರ ಅವಳನ್ನೇ ಹುಡುಕಿಕೊಂಡು ಎಷ್ಟೋ ಜನ ಬರೋಕ್ಕೆ ಶುರುಮಾಡ್ತಾರೆ.

ಗಂಗೂ ತನ್ನ ಬುದ್ಧಿವಂತೆಕೆಯಿಂದ, ಪ್ಲ್ಯಾನ್ ಗಳಿಂದ ಬೆಳೆದ ರೀತಿ ಅಮೇಜಿಂಗ್ ಅನ್ಸಿಬಿಡುತ್ತೆ. ಮುಂದೆ ಆಕೆ ಇಡೀ ಕಾಮಾಟಿಪುರವನ್ನ ರಾಣಿಯಂತೆ ಆಳುತ್ತಾಳೆ. ಅದೆಷ್ಟೋ ಕಷ್ಟಗಳಿಂದ ವೇಶ್ಯೆಯರನ್ನ ಕಾಪಾಡ್ತಾಳೆ. ಎಲ್ಲರು ಆಕೆಗೆ 'ಅಮ್ಮ' ಅಂತಾರೆ. ವೇಶ್ಯೆಯರು ಸಮಾಜಕ್ಕೆ ಎಷ್ಟರಮಟ್ಟಿಗೆ ಅವಶ್ಯಕ ಅಂತ ಆಕೆ ಮಾಡಿದ ಭಾಷಣ ಸಭೆಯಲ್ಲಿ ನೆರೆದಿದ್ದ ರಾಜಕಾರಣಿಗಳಿಗೆ, ಸಮಾಜ ಸೇವಕರಿಗೆ, ದೊಡ್ಡ ದೊಡ್ಡ ಹುದ್ದೆಯಲ್ಲಿರುವವರಿಗೆ ಸಿಡಿಲು ಬಡಿದಂತಾಗಿತ್ತು.


ಗಂಗೂಬಾಯಿ ಸೀರೆಯ
ಅಂಚಿಗೆ ಬಂಗಾರದ ಪಟ್ಟಿಯಿರ್ತಾಯಿತ್ತು, ಬ್ಲೌಸಿಗೆ ಬಂಗಾರದ ಗುಂಡಿಗಳು. ಆ ಕಾಲದಲ್ಲಿ ಆಕೆಯ ಹತ್ತಿರ ಇದ್ದಿದ್ದು 'ಬೆಂತ್ಲಿ' ಕಾರಿತ್ತು. ಭಯಂಕರ ಆಸ್ತಿ. ಈಗಲೂ ಕಾಮಾಟಿಪುರದ ಎಷ್ಟೋ ಮನೆಗಳಲ್ಲಿ ಆಕೆಯನ್ನ ಪೂಜಿಸ್ತಾರೆ, ಆಕೆದೊಂದು ಫೋಟೋ ಇಟ್ಟಿರ್ತಾರೆ. ಅಲ್ಲಿಯೇ ಆಕೆದೊಂದು ಮೂರ್ತಿಯಿದೆ.

೧೯೬೦ ರಲ್ಲಿ ಒಬ್ಬ ವೇಶ್ಯೆಯಾಗಿ / ಕಾಮಾಟಿಪುರದ ಲೀಡರ್ ಆಗಿ ಭಾರತದ ಪ್ರದಾನ ಮಂತ್ರಿ ನೆಹರು ಜೊತೆ ಆಕೆ ಮೀಟಿಂಗ್ ಮಾಡಿದ್ದಳು ಅಂದ್ರೆ ನೀವು ನಂಬ್ತೀರಾ ? ನಂಬಲೇ ಬೇಕು!!

"ಯಾಕಮ್ಮ ನೀನು ವೆಶ್ಯೇಯಾದೆ ? ಒಂದು ಒಳ್ಳೆ ಕೆಲ್ಸಾ ಮಾಡೋದಲ್ವ ? ಒಳ್ಳೆ ಗಂಡನ ಜೊತೆ ಇರಬಹುದಲ್ವಾ ?" ಅಂತ ನೆಹರು ಕೇಳಿದ್ರೆ.
"ನೀವು ನನ್ನ ಶ್ರೀಮತಿ. ನೆಹರು ಅಂತ ಮಾಡಿಕೊಳ್ಳೋದಾದ್ರೆ, ನಾನು ಈಗಿನ ಕೆಲಸ ಬಿಡ್ತೀನಿ" ಅಂದಳು ಗಂಗೂಬಾಯಿ, ನೆಹರು ಕಕ್ಕಾಬಿಕ್ಕಿ.

ನೂರಾರು ಜನ ವೇಶ್ಯೆಯರನ್ನ ಮತ್ತು ರಾಜಕಾರಣಿಗಳನ್ನ, ಗೂಂಡಾಗಳನ್ನ, ಮಾದ್ಯಮದವರನ್ನ ಆಕೆ ಹ್ಯಾಂಡಲ್ ಮಾಡ್ತಿದ್ದಳು ಅಂದ್ರೆ ಅದೇನ್ ತಮಾಷೆ ಮಾತಾ?

ಮಹಾನಗರಿ ಮುಂಬೈ ಕ್ರೂರಪ್ರಪಂಚ/ ಅಂಡರ್ ವಲ್ಡ್ ನ ಇನ್ನು ಅನೇಕ ರಾಣಿಯರ ಬಗ್ಗೆ ನಿಮಗೆ ಓದಬೇಕು ಅನಿಸಿದರೆ.
ಎಸ್. ಹುಸೇನ್ ಜೈದಿ ಬರೆದಿರುವ "ಮಾಫಿಯ ಕ್ವೀನ್ಸ್ ಆಫ್ ಮುಂಬೈ" ಪುಸ್ತಕವನ್ನ ನೀವು ಓದಬೇಕು.
ಓದಿದ ಮೇಲೆ ಖಂಡಿತವಾಗಿಯೂ ಬೇರೆಯದೊಂದು ಪ್ರಪಂಚ ನಿಮಗೆ ಕಾಣುತ್ತೆ. ನೀವು ಓದ್ತೀರಾ ನನಗೊತ್ತು.

=====
=====

Jun 21, 2011

"ಇದು ಸೈಡ್ ಸ್ಟೋರಿ"


. 'ಇದು ನಾಯಿ ಪ್ರೀತಿ'

ನಿನ್ನ ಕೇಶರಾಶಿ ನೋಡಲು ರೋಮಾಂಚನ
ನೀ ನನ್ನತ್ತ ಬರಲು ನನ್ನೊಳಗೆ ಮಧುರ ಕಂಪನ
ಆದರೂ ಸಹಿಸಲಾರೆ ನಿನ್ನೀ ಎಂಜಲಿನ ತುಂತುರು ಸಿಂಚನ
ನನ್ನ ಮುದ್ದು ನಾಯಿಮರಿಯೇ ತಪ್ಪು ತಿಳಿಯಬೇಡ ನನ್ನ

. 'ಇದುವೇ ಸದ್ಮಾ'

ಮೊದ್ಲು, ಅವಳು ನನ್ನ ನೋಡಿ 'ಕಿಸ ಕಿಸ ಕಿಸಕ್' ಅಂತ ನಗ್ತಿದ್ಲು
ಆಗೆಲ್ಲ ನನ್ನ ಕಣ್ಣಿಗೆ ಫುಲ್ ಬೆಳದಿಂಗಳು

ಒಮ್ಮೆ ಫೋನ್ ಮಾಡಿ ಕರೆದಳು
ನಾ ಹೋಗ್ದೆಯಿರ್ತಿನಾ ?

ಲಗ್ನಪತ್ರ ಕೈಗಿಟ್ಟು ಮತ್ತೆ 'ಕಿಸಿ ಕಿಸಿ ಕಿಸಕ್' ಅಂತ ನಕ್ಕಳು
ನನ್ನ ಕಣ್ಣ ಮುಂದೆ ಅಮಾವಾಸ್ಯೆ ಕತ್ಲು

ಹೇಳ್ದೆ ಕೇಳ್ದೆ ಶೋಕಗೀತೆಯ ಕೋರಸ್ ಶುರುವಾತು :
'
ಇದು ಸದ್ಮಾ . . . ಇದುವೇ ಸದ್ಮಾ,
ನಿನಗ್ಯಾಕ ಬೇಕಾಗಿತ್ತು ಉಸಾಬರಿ ತಮ್ಮಾ . . . '

. 'ಶೀಟ್ ಮ್ಯಾನ್'

ಬೆಳಗಾದ ಮೇಲೂ ಅವಳು,
ರಾತ್ರಿ ಕೊಟ್ಟ ಮುತ್ತಿನ ಗಮ್ಮತ್ತು ಇನ್ನೂ ಇತ್ತು-ಇಸ್ ಇಟ್ ? ಅಬ್ಬೋ

ಹಾಲು ಕರಿಯಲು,
ಕೊಟ್ಟಿಗೆಯತ್ತ ಹೋದೆ ತೂರಾಡುತ ಅಮಲಿನಲ್ಲಿ, ಮುತ್ತಿನ ಅಮಲಿನಲ್ಲಿ
ಲಿಪ್ಪಿಸ್ಟಿಕ್ಕಿನ ಕೆಂಪು ತುಟಿಗಳ ಗುರುತು ಇನ್ನೂ ಇತ್ತು - ಆಹಾ ಕಳ್ಳ, ಬರೀ ಮುತ್ತಿಗೆ ಟೈಟಾದ್ರೆ ಹೆಂಗೆ ?

ನೀರು ಚಿಮುಕಿಸಿ ಹಸುವಿನ ಕೆಚ್ಚಲಿಗೆ ಕೈಹಾಕುವ ಮುನ್ನವೂ,
ನನ್ನಲ್ಲಿ ಮುತ್ತಿನ ಮತ್ತೇ ಇತ್ತು - ಇದ್ಯಾಕೋ ಸ್ವಲ್ಪ ಜಾಸ್ತಿಯಾಯ್ತು.
ಕೆಚ್ಚಲಿಗೆ ಕೈಹಾಕಿದ ಕ್ಷಣಾರ್ಧದಲ್ಲಿ ಕಂಡವು ನಕ್ಷತ್ರ - ಬೆಳಗ್ಗೆ ನಕ್ಷತ್ರಗಳಾ? ಏನಾಯ್ತು?

ಕೆಚ್ಚಲಿಗೆ ಕೈಹಾಕಿದವನಿಗೆ ಹಾಲು ಸಿಗಲಿಲ್ಲ, ಅಸಲಿಗೆ ಕೆಚ್ಚಲಿದ್ದರೆ ತಾನೇ !!
ಮುತ್ತಿನ ಗುಂಗಿನಲ್ಲಿ ನಾನು ಅದರ ಲಿಂಗ ಭೇದ ಮಾಡಿದನಲ್ಲನೆಂಬ ಸಿಟ್ಟಿನಲ್ಲಿ ಝಾಡಿಸಿ ಒದ್ದುಬಿಟ್ಟಿತಲ್ಲ 'ಎತ್ತು' - ಶೀಟ್ ಮ್ಯಾನ್

=====
=====

May 21, 2011

"ನಾನೂ ಒಂದು ಪದ . . . . "

ಏಕಾಂತದಲ್ಲಿ ಅವಳ ಮುಂದೆ ಹಾಡಬೇಕೆಂದು

ಹೂವು, ಚಂದ್ರ, ಮಳೆ, ತಂಗಾಳಿ - ಎಲ್ಲವನ್ನ ಪೋಣಿಸಿ
ಇಷ್ಟಪಟ್ಟು, ಪ್ರೀತಿಯಿಂದ ಒಂದು ಪದ ಕಟ್ಟಿದ್ದೆ.

ಆಗ,

ಹಾಡಲು ಒಂದೇ ಒಂದು ಅವಕಾಶ ಕೊಡಲಿಲ್ಲ; ಆಕೆ.
ನಾನು ಪ್ರಯತ್ನಿಸಿದೆನಾದರು, ನಾನೂ ಸುಮ್ಮನಾಗಿಬಿಟ್ಟೆ

ಕಾಲಪಲ್ಲಟಕ್ಕೆ ಯಾರ ಹಂಗು - ನನ್ನದಾ ? ಅವಳದಾ?

ಚಲಿಸುತ್ತಲೇ ಬಂತು, ನಿಲ್ಲಿಸಲು ನಾನು ಪ್ರಯತ್ನಿಸಲಿಲ್ಲ

**

ಅನಿರೀಕ್ಷಿತವಾಗಿ ಎದುರಿಗೆ ಬಂದು ನಿಂತಿದ್ದಾಳೆ,
ಅವಳಲ್ಲಿ ನಿಶ್ಯಬ್ದಕ್ಕಿಂತ ಮೆಲು ಮಾತು - ಮತ್ತೇನು ಉಳಿದಿಲ್ಲ

ಈಗ,

ಕಷ್ಟಪಟ್ಟರೂ, ಯಾಕೋ ಒಂದು ಸಾಲು ನೆನಪಾಗುತ್ತಿಲ್ಲ,
ಮರೆತ ಮಾತನ್ನ ಕೆದಕುವ ಪುರಸೊತ್ತು ನನಗಿಲ್ಲ.
ನಿಜ - ನಾನು ಒಮ್ಮೆ ಪದ ಕಟ್ಟಿದ್ದೆ.

=====

=====

May 2, 2011

"ಕಾವ್ಯ , ಅಮೃತ ಮತ್ತು ಗರುಡ"


ಯಾವುದೇ ಆದರೂ, ಅದನ್ನ ನೋಡುವಾಗ ನೋಡುಗನ ಮನಸ್ಥಿತಿ ಮತ್ತು ಅನುಭವ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಹುಡುಗಿಯನ್ನ ಬೇರೆ ಬೇರೆ ಹುಡುಗರು ಬೇರೆ ಬೇರೆ ಆದ ರೀತಿಯಲ್ಲಿ ವರ್ಣಿಸುತ್ತಾರೆ - ಅದೆಷ್ಟು ಸತ್ಯ, ಸುಳ್ಳು; ಮಾತು ಬ್ಯಾರೆ.

ಒಂದೇ ವಸ್ತುವಿನ ಬಗ್ಗೆ ಬೇರೆ ಬೇರೆ ಕವಿಗಳು, ಸಾಹಿತಿಗಳು ಬೇರೆ ಬೇರೆಯದೆ ರೀತಿಯಲ್ಲಿ ಬರೆಯುತ್ತಾರೆ. ಅವುಗಳಲ್ಲಿ ಯಾರದು ಎಷ್ಟು ನಿಜ ಅನ್ನುವುದಕ್ಕಿಂತ - ಅದು ಅವರು ಕಂಡುಕೊಂಡ ಸತ್ಯ ಅಷ್ಟೇ. ಓದಿದ ಮೇಲೆ ಯಾವುದು ನಮ್ಮಲ್ಲಿ ಹರಳುಗಟ್ಟಿ ನಿಲ್ಲುತ್ತದೆಯೋ ಅದು ನಮಗೆ ಹತ್ತಿರವಾದ ಸತ್ಯ. ಕನ್ನಡದಲ್ಲಿ 'ಕವಿತೆ' ಅನ್ನೋ ಪದ 'ಬೇಂದ್ರೆ' ಅನ್ನೋ ಹೆಸರನ್ನ ಥಟ್ಟಂತ ಸೂಚಿಸಿಹೊಗುವಷ್ಟರಮಟ್ಟಿಗೆ ಬೇಂದ್ರೆ ಅವರ ಬರಹ, ಬದುಕು ಎರಡು ದೊಡ್ಡವು.

ಶ್ರೀಕೃಷ್ಣ ಆಲನಹಳ್ಳಿ, ಕನ್ನಡದ ಮತ್ತೊಬ್ಬ ಪ್ರತಿಬಾವಂತ ಬರಹಗಾರ. ಆತ ಬದುಕನ್ನ ತುಂಬಾ ತೀವ್ರವಾಗಿ ಬದುಕಿದ ಅಂತಾರೆ. ಅವರ ಎಲ್ಲ ಪುಸ್ತಕಗಳೂ ಮಲಯಾಳಂ ಭಾಷೆಗೆ ಅನುವಾದಗೊಂಡಿವೆ - ಕೇರಳದವರು ಸುಲಭವಾಗಿ ಬೇರೆ ಭಾಷೆಯವರನ್ನ ಒಪ್ಪಲ್ಲ. ಶ್ರೀಕೃಷ್ಣ ಅವರು ಹಟಕ್ಕೆ ಬಿದ್ದು ಬರೀತಾಯಿದ್ರಂತೆ. ಆತ ಹತ್ತಿರವಾಗಿದ್ದು ತನ್ನ ಕೃತಿಗಳಲ್ಲಿ ಬಾಲ್ಯವನ್ನ ಕಟ್ಟಿಕೊಟ್ಟ ರೀತಿಯಿಂದ - ಆತನ ಶೈಲಿಯೇ ಬೇರೆ. ರಾಜಕಿಯವಾಗಿಯು ತಕ್ಕಮಟ್ಟಿಗೆ ತಮ್ಮನ್ನು ತೊಡಗಿಕೊಂಡಿದ್ದ ಶ್ರೀಕೃಷ್ಣ ಆಲನಹಳ್ಳಿಯವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ವಲಯದಲ್ಲಿ ನಷ್ಟವೇ ಸರಿ.

ಹಿರಿಯ ಕವಿಗಳಾದ ಎಚ್ ಎಸ್ ವೆಂಕಟೇಶ್ ಮೂರ್ತಿಯವರು ಹೇಳುವಂತೆ 'ಪ್ರಾಚೀನ ಸಾಹಿತ್ಯದಿಂದ ಇಂದಿನವರೆಗೂ ಕವಿತೆಗಳಿಗೆ ಸ್ಪಂದನೆ ಕಡಿಮೆಯೇ'. ಕಾರಣ, ಕವಿತೆ ಆಳಕ್ಕಿಳಿದರೆ ಮಾತ್ರ ತನ್ನನ್ನ ತೆರೆದುಕೊಳ್ಳುತ್ತೆ, ಪರಿಮಳವನ್ನ ಸೂಸುತ್ತೆ. 'ಸತ್ಯವನ್ನ ಸಮರ್ಪಕವಾಗಿ ಸೆರೆಹಿಡಿಯುವ ಒಂದೇ ಒಂದು ಸಾಹಿತ್ಯ ಪ್ರಕಾರ ಅಂದ್ರೆ ಅದು ಕವಿತೆ' ಹಾಗಂತ ಖ್ಯಾತ ವಿಮರ್ಶಕರಾದ ಡಿ ಆರ್ ನಾಗರಾಜ್ ಅವರು ತಮ್ಮ 'ಅಮೃತ ಮತ್ತು ಗರುಡ' ಪುಸ್ತಕದಲ್ಲಿ ಬರೀತಾರೆ.

'ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ' - ಬೇಂದ್ರೆಯವರ ಈ ಸಾಲನ್ನೇ, 'ಅಮೃತ ಮತ್ತು ಗರುಡ' ಅಂತ ನಾಗರಾಜ್ ಅವರು ತಮ್ಮ ಪುಸ್ತಕಕ್ಕೆ ಹೆಸರಾಗಿ ಬಳಸಿಕೊಂಡರು. ಈ ಕಾವ್ಯಕ್ಕೂ, ಗರುಡನಿಗು ಮತ್ತು ಅಮೃತಕ್ಕೂ ಏನು ಸಂಬಂಧ ಅಂದ್ರೆ: ಗರುಡ ಶಕ್ತಿಯ ಸಂಕೇತ, ಸ್ವರ್ಗದಲ್ಲಿದೆ ಅಂತ ನಂಬಲಾದ ಅಮೃತ ಸ್ನೇಹ,ಪ್ರೀತಿ, ಮಮತೆ, ವಾತ್ಸಲ್ಯಗಳ ಸಂಕೇತ. ಭೂಮಿಯಲ್ಲಿ- ಸಮಾಜದಲ್ಲಿ- ಅಮೃತದ ಕೊರತೆ ಕಂಡಾಗ, ಅದನ್ನ ನಾನು ತರ್ತೇನೆ ಅಂತ ತನ್ನೆಲ್ಲ ಶಕ್ತಿಯನ್ನ ಒಗ್ಗೂಡಿಸಿಕೊಂಡು ಸ್ವರ್ಗಕ್ಕೆ ಹಾರುವುದು ಗರುಡ (ಗರುಡ ಪುರಾಣದಲ್ಲಿ, ಸರ್ಪಗಳಿಂದ ತಾಯಿಯನ್ನ ಕಾಪಾಡಲು ಗರುಡ ಅಮೃತವನ್ನ ತರಲೆಂದು ಸ್ವರ್ಗಕ್ಕೆ ಹಾರುತ್ತಾನೆ). ಸಾಹಿತ್ಯ ಪ್ರಕಾರಗಳಲ್ಲಿ ಗರುಡ ಅಂದ್ರೆ ಕಾವ್ಯ ಅಂತಾರೆ ಬೇಂದ್ರೆಯವರು . ಯಾವ ಕಾಲದ ಗರುಡ ಪುರಾಣ, ಯಾವ ಕಾಲದ ಬೇಂದ್ರೆ; ಇಡೀ ಗರುಡ ಪುರಾಣವನ್ನ ಒಂದೇ ಒಂದು ಸಾಲಿನಲ್ಲಿ ಕಾವ್ಯಕ್ಕೆ ಹೋಲಿಸಿ ಬರೆದರಲ್ಲ ಎಂಥಾ 'ಶಬ್ದ ಗಾರುಡಿಗ'.

ಬೇಂದ್ರೆ ಮತ್ತು ಶ್ರೀಕೃಷ್ಣ ಅವರು ಬೆಳಗನ್ನ ಬೇರೆ ಬೇರೆ ರೀತಿ ಸೆರೆಹಿಡಿದಿದ್ದಾರೆ. ನಮಗೆಲ್ಲ ಇರೋದು ಒಂದೇ ಬೆಳಗು ಆದರೆ ಕಂಡುಕೊಂಡ ಸತ್ಯ ಮಾತ್ರ !! ??. ಸತ್ಯ ಅನ್ನೋದು ಎಲ್ಲರಿಗೂ ಗೊತ್ತಾಗುವಂತಹದ್ದಲ್ಲ, ಅದು ಎಲ್ಲರಿಗೂ ಗೊತ್ತಾಗಲೂಬಾರದು; ಯಾರು ಸತ್ಯಕ್ಕಾಗಿ ಹುಡುಕುತ್ತಾರೋ, ಅದಕ್ಕಾಗಿ ಆಳಕ್ಕಿಳಿಯುತ್ತಾರೋ ಅವರಿಗೆ ಮಾತ್ರ ದಕ್ಕುವಂತಹದ್ದದು! ಹಾಗಾಗಿ ಕವಿತೆಗಳು ಸುಲಭವಾಗಿ ಯಾರಿಗೂ ಅರ್ಥವಾಗೋಲ್ಲ, ಮಾರುಕಟ್ಟೆಯಲ್ಲಿ ಕವನ ಸಂಕಲನಗಳು ಮಾರಾಟವಾಗುವುದು ಕಡಿಮೆಯೇ - ಬೆಲೆ ಕಡಿಮೆಯಿದ್ದರೂ ಕೂಡ!

ಬೇಂದ್ರೆ ಅವರ 'ಬೆಳಗು'

ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ

ನುಣ್ಣನೆ ಎರಕಾವ ಹೊಯ್ದ

ಬಾಗಿಲ ತೆರೆದು ಬೆಳಕು ಹರಿದು

ಜಗವೆಲ್ಲ ತೊಯ್ದ

ಎಲೆಗಳ ಮೇಲೆ, ಹೂಗಳ ಒಳಗೆ ಅಮೃತದಾ ಬಿಂದು

ಕಂಡವು ಅಮೃತದಾ ಬಿಂದು

ಯಾರಿರಿಸಿಹರು ಮುಗಿಲಿನ ಮೇಲಿನ ಇಲ್ಲಿಗೆ ಇದ ತಂದು.


ಶ್ರೀಕೃಷ್ಣ ಅವರ 'ಬೆಳಗು'

ಇರುಳ ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ

ಸೂರ್ಯ: ಜಿಬುರೆಗಣ್ಣೋರಸುತ್ತಾಕಳಿಸಿ

ಕೊಬ್ಬಿದಾದು , ಕುರಿ , ಕೋಳಿ ಸಿಗಿದು ಸೀಳಿ

ಕಂದು , ನೀಲಿ , ಬಿಳಿ , ಕೆಂಪು ಖಂಡಗಳ ತೂಗಿತ್ತು

ಬಣ್ಣ ಬಣ್ಣದ ಮೂಡಣದ ಮಾಂಸದಂಗಡಿ ತೆರೆದಾಗ

ನನ್ನೂರಿನಲ್ಲಿ ಬೆಳಗಾಯಿತು.


ಬೇಂದ್ರೆ ಅವರ ಅಮೃತದಾ ಬಿಂದು, ಶ್ರೀಕೃಷ್ಣ ಅವರ ಮಾಂಸದಂಗಡಿ ಕಂಡದ್ದು ಬೆಳಗಿನಲ್ಲಿ ಅನ್ನೋದು ಸತ್ಯ.

ನಿಮ್ಮ ಸತ್ಯ ನಿಮ್ಮೊಳಗಿದೆ ಅದೂ ಸತ್ಯವೇ.


(

ಶ್ರೀಕೃಷ್ಣ ಅವರ 'ಊಟಕ್ಕೆ ಕೂತಾಗ' ಈಗಾಗಲೇ ಒಮ್ಮೆ ಪೋಸ್ಟ್ ಮಾಡಿದ್ದೆ: http://pennupaper.blogspot.com/search?updated-min=2010-01-01T00%3A00%3A00-08%3A00&updated-max=2011-01-01T00%3A00%3A00-08%3A00&max-results=35 )

Apr 20, 2011

"ಅವಳು - ನಾನು"

ತುಟಿಯ ಹಸಿವು ಸಹಿಸಲಾಗದೆ,
ಒಂದು ಶಕ್ತಿಯುತವಾದ ಮುತ್ತಿಗೆ ಪರಿತಪಿಸುವ ಅವಳು.
ಭಯ ಮಿಶ್ರಿತ ಕಂಪನದಲ್ಲಿ ಸಿಗರೇಟು ಹಚ್ಚುವ ನಾನು.

ಬೆಂಕಿಕಡ್ಡಿಯ ಬೆಂಕಿಯಂತೆ,
ನನ್ನ ಸುಡುವಂತೆ ನೋಡುವ ಅವಳು.
ನನ್ನ ಸಂಕಟ ನನಗೆ - ನಡುಗುವ ಹೋಗೆ ಬಿಡುವ ನಾನು.

'ಏನೋ ಯೋಚನೆ ಮಾಡ್ತಿದಿಯಾ, ರಾಕ್ಷಸ ?' ಅನ್ನುವ ಅವಳು.
ತಲೆ ಅಲ್ಲಾಡಿಸಿ ಮತ್ತದೇ ಹೋಗೆ ಬಿಡುವ ನಾನು.

ತುಟಿಯಂಚಿಗೆ ಬೆರಳೊಯ್ದರೆನೆ ಕಚ್ಚುವ ಹುಡುಗಿ, ಅವಳು.
'ಇನ್ನು ಮುತ್ತಿಟ್ಟರೆ ಗತಿ ಏನು ?' ಅಂದುಕೊಳ್ಳುವ ನಾನು.

ಜಿಟಿಗುಡುವ ಮಳೆಯ ಸಂಜೆ,
ಮರದಡಿಯಲ್ಲಿ ನಿಂತಿದ್ದೇವೆ ಅವಳು-ನಾನು.
ಅವಳ ಬಿಸಿಯುಸಿರ ನಡುವೆ ಇನ್ನೊಂದು ಸಿಗರೇಟು ಹಚ್ಚಿಕೊಂಡೆ ನಾನು.

ಇನ್ನೂ ಕಾಯುತ್ತಿದ್ದಾಳೆ ಅವಳು.
ಹನಿಗಳು ಮಣ್ಣಿಗೆ ಮುತ್ತಿಡ್ತಾಯಿವೆ--ಸುಮ್ನೆ ನೋಡ್ತಾಯಿದಿನಿ ನಾನು.


ಇನ್ನೇನು, ಕೆಲವು ಕ್ಷಣಗಳಲ್ಲಿ ಮಹಾಸ್ಪೋಟ -ಅವಳು.
ಖಾಲಿ ಖಾಲಿ ಬರೀ ಖಾಲಿ ನಾನು.
=====
=====


Apr 16, 2011

ಪಕ್ಕು ಮಾಮಾ... ಮತ್ತೆ ಬಂದ...!!

ನಿನ್ನೆ ಚಾರ್ಲಿ ಚಾಪ್ಲಿನ್ ೧೨೨ ನೆ ಜನ್ಮದಿನ.

ಕಷ್ಟದ ಜೀವನ ಬದುಕಿದರೂ, ಎಲ್ಲರನ್ನೂ ನಗಿಸಿದ ಹಾಸ್ಯ ಬ್ರಹ್ಮ.

ಅವನಿಗೊಂದು ಸಲಾಮು.. ಬನ್ನಿ ನೀವು ಸ್ವಲ್ಪ ನಕ್ಕು ಬಿಡಿ..!!






ಇತ್ತೀಚಿಗೆ ನಮ್ಮ 'ಪಕ್ಕು ಮಾಮಾನ' ತಲೆಯ 'ಹೊಳಪು' ಜಾಸ್ತಿ ಆಗಿದೆ.

ಮೊದಲು ಮುಂದೆ ಸೂರ್ಯೋದಯ ಹಿಂದೆ ಚಂದ್ರೋದಯದಂತಿದ್ದ ಅವರ ತಲೆ

ಈಗ ಅರ್ಧ ಎಕರೆ ಬಂಜರಾಗಿದೆ..!

ಏನ್ ಮಾಮಾ ಹೀಂಗೆ ಅಂದ್ರೆ..?

ಏ ಬಿಡ್ರೋ ಅಳಿಯಂದಿರ "ಹೇನುಗಳು ಖುಷಿಯಾಗಿರ್ತಾವೆ" ಅಂತಾರೆ..!!!

ನಿಮ್ಮ ತಲೆಕೂದಲು ಉದುರೋದಕ್ಕು ಹೇನುಗಳ ಆನಂದಕ್ಕೂ ಏನ್ ಲಿಂಕು ಮಾಮಾ..? ನೋಡ್ರೋ.. ಅರ್ಧಂಬರ್ಧ ತಲೆಕುದಲಿದ್ರೆ, ಹೇನುಗಳಿಗೆ ಆನಂದವೋ ಆನಂದ..!

ಅವು ಬೇಕೆಂದಾಗ "ಜಾರು ಬಂಡೆ ಆಡಬಹುದು, ಮರಕೋತಿ ಆಟನೂ ಆಡಬಹುದು"


*****

ಅದೊಮ್ಮೆ ಕಾಲೇಜಿನಲ್ಲಿ ' ಸಾಂಸ್ಕೃತಿಕ ' ಕಾರ್ಯಕ್ರಮ ನಡಿಯುವುದಿತ್ತು.

ಸರಿ, ಎಲ್ಲ ತಯಾರಿ ಶುರು ಆದವು ಹಾಗು ಎಲ್ಲವೂ ಸರಿಯಾಗಿ ಯೋಜಿಸಲಾಯ್ತು.

ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಂಡಿದ್ದ, 'ಪಕ್ಕು ಮಾಮಾ' ಮುಂದಾಳತ್ವ ವಹಿಸಿಕೊಂಡಿದ್ದ.

ಆದರೇ...? ಇಲ್ಲಿ ಒಂದು ಸಮಸ್ಯೆ..!

ಅದು ಅಂತಹ ದೊಡ್ಡದಲ್ಲ, ಆದರೂ ಅದನ್ನ ತಡಿಯಬೇಕು..!

ಅದು ಕಾಲೇಜಿನಲ್ಲಿರುವ 'ಶೌಚಾಲಯದ' ಸ್ವಚ್ಚತೆ..!

ಕಾರ್ಯಕ್ರಮ ಅಂದಮೇಲೆ ಜಾಸ್ತಿ ಜನ ಬರ್ತಾರೆ ಬಂದವರು ಇಲ್ಲಿಗೊಂದು ಭೇಟಿ ಕೊಡ್ತಾರೆ.

ಅವರಿಗೆ ಭೇಟಿ ಕೊಡಬೇಡಿ ಎಂದು ಹೇಳಲಿಕ್ಕೆ ಆಗದು ಆದರು ಸಚ್ಚವಾಗಿರಬೇಕು.!

ಕಷ್ಟ ಕಷ್ಟ..


ಪಕ್ಕು ಮಾಮಾನಿಗೆ ಸಹಾಯಕ್ಕೆ ಬಂದಿದ್ದು ಮತ್ತೊಬ್ಬ 'ಪ್ರತಿಭಾ-ವಂತ' ವಿದ್ಯಾರ್ಥಿ,

"ಚಪಾತಿ ಮಿತ್ರ, ನಾಗು"..!

ಕೊನೆಗೂ ನಾಗುವಿನ ಉಪಾಯ ಫಲಿಸಿತು..!

ಉಪಾಯ ಹೀಗಿತ್ತು:

"ಮಹಿಳೆಯರಿಗೆ" ಅಂತ ಬರೆದಿದ್ದ ಸುತ್ತ ಮುತ್ತ 'ಅಂದಕಾಲತ್ತಿಲ್' "ಹಿರೋಗಳ" ವಿವಧ ಭಂಗಿಯ ಕೆಲವು ಚಿತ್ರಗಳು.

"ಪುರುಷರಿಗೆ" ಅಂತ ಬರೆದಿದ್ದರ ಸುತ್ತಮುತ್ತ, ಹೂವಿನ ಮಾಲೆ ಹಿಡಿದಿದ್ದ,

ಆರತಿ ಹಿಡಿದು ನಿಂತಿದ್ದ, ಮಾದಕವಾಗಿ ನೋಡುತಿದ್ದ "ಹಿರೋಯಿನ್" ಫೋಟೋಗಳು

ಅಂಟಿಸಿದ್ದ ಅಷ್ಟೇ.!!


*****

ಅದ್ಯಾಕೋ ಗೊತ್ತಿಲ್ಲ.. ಇತ್ತೀಚಿಗೆ ಪಕ್ಕು ಮಾಮಾನ ಮೊಬೈಲಿಗೆ ಅನಾಮಧೇಯ ಕರೆಗಳು ಜಾಸ್ತಿ ಆಗ್ಬಿಟ್ಟಿದಾವೆ.!

ಕಳೆದವಾರ ಒಬ್ಬ ಪುಣ್ಯಾತ್ಮ ಫೋನ್ ಮಾಡಿ, ದುಡ್ಡು, ಡೆಲಿವರಿ,

"ಫಾರಿನ್ ಮಾಲು' ಅಂತ ಏನೇನೋ ಮತಾಡಿದ್ನಂತೆ.!

ಈಗ ನಿನ್ನೆ ನೋಡಿದ್ರೆ.......

ಹೇಯ್ ನೀವೇ ಕೇಳಿಬಿಡಿ..


ಆತ: ಹಲೋ ಸರ್ ನಮಸ್ಕಾರ..

ಪಕ್ಕು ಮಾಮಾ: ನಮಸ್ತೆ ಸಾರ್ ಹೇಳಿ...

ಆತ: ಸಾರ್ ನೀವು ಪ್ರಕಾಶ್ ಅವರಾ..?

ಪಕ್ಕು ಮಾಮಾ: ಹೌದು ಸಾರ್ ನಾನೇ.

ಆತ: ಸಾರ್ ನೀವು ಪ್ರಕಾಶ್ ಹೆಗಡೆ ಅವರಾ..?

ಪಕ್ಕು ಮಾಮಾ: ಖಂಡಿತ ಅದು ನಾನೇ.

ಆತ: ಸಾರ್ ನೀವು "ಚಪಾತಿ" ಪ್ರಕಾಶ್ ಹೆಗಡೆ ಅವರಾ..!??

ಪಕ್ಕು ಮಾಮಾ: ಹಾ..!...ಹು....! ಹು... ಸಾರ್ ನಾನೇ..

ಆತ: ಸಾರ್ ನಿಮ್ಮ ಬಗ್ಗೆ ತುಂಬಾ ಕೇಳಿದೀನಿ ಸಾರ್.

ಪಕ್ಕು ಮಾಮಾ: ಒಹ್.. ತುಂಬಾ ಧನ್ಯವಾದಗಳು ಸರ್...

ಆತ: ಸಾರ್ ಈಗ ನೀವು ನಮಗೆ ಬೇಕೇ ಬೇಕು.. ನಿಮ್ಮ ಬಗ್ಗೆ ತುಂಬಾ ಕೇಳಿದೀನಿ..!!


ಪಕ್ಕು ಮಾಮಾ: ಸಾರ್ ನಾನ್ ಬೇಕಾ..??

ಆತ: ಸಾರ್, ನೀವು ಏನು ನೆಪ ಹೇಳಂಗಿಲ್ಲ...

ಅದು ಏನಾದ್ರೂ ಆಗ್ಲಿ.. ಆದರೇ ನನಗೆ ನೀವು ಬೇಕು..

ನನಗೆ ೫೦೦ ಜನಕ್ಕೆ ಆಗೋವಷ್ಟು "ಚಪಾತಿ" ಬೇಕು.!!

ಬರೋ ಭಾನುವಾರ ನಮ್ಮ ಮನೆಯಲ್ಲಿ ಫಂಕ್ಷನ್ ಇದೇ.

ಪಕ್ಕು ಮಾಮಾ: (ತಲೆ ಕೆರೆಯುತ್ತ ) ಅಲ್ಲ ಸಾರ ನಾನೂ....

ಆತ: ಸಾರ್ ನೀವು ಏನು ಹೇಳಲೇ ಬೇಡಿ..

ನೋಡೀ ದೊಡ್ಡ ದೊಡ್ಡ ಜನ ಬರ್ತಾರೆ.. ದೊಡ್ಡ ಫ್ಯಾಮಿಲಿಯವರು ಬರ್ತಾರೆ,

ಅವರಿಗೆಲ್ಲ ಖುಷಿ ಆಗೋ ಹಂಗೆ ನೀವು "ಚಪಾತಿ" ಮಾಡಬೇಕು..

ಮುಟ್ಟಿದರೆ ಅಂಗೆ ರೇಷ್ಮೆ ಇದ್ದಂಗೆ, ಮಲ್ಲಿಗೆ ಹೂ ಇದ್ದಂಗೆ ಇರಬೇಕು..

ಇನ್ನೊಂದು, ಮತ್ತೊಂದು ಕೇಳಬೇಕು.. ಅಂಥ ಚಪಾತಿ ಮಾಡಬೇಕು.


ಪಕ್ಕು ಮಾಮಾ: ಅಲ್ಲ ಸಾರ್ ದಯವಿಟ್ಟು ಕೇಳಿ ಇಲ್ಲಿ.. ನಾನೂ ಆ........

ಆತ: ನೀವು ಟೆನ್ಶನ್ ಮಾಡ್ಕೋಬೇಡಿ ಸಾರ್.

ಎಲ್ಲ ಮಟೆರಿಯಲ್ ನಾವೇ ರೆಡಿ ಮಾಡಿ ಇದ್ತಿವಿ..

ಆದರೇ, "ಚಪಾತಿ" ನಿಮ್ದೆ ಬೇಕು..!

ನೀವೇ ಮಾಡಬೇಕು..

ದೊಡ್ಡ ದೊಡ್ದೊರೆಲ್ಲ ಬರ್ತಾರೆ, ಎಲ್ಲರಿಗೂ "ನಿಮ್ದೆ ಚಪಾತಿ"..

ಎಲ್ಲರು ನನಗಿನ್ನೊಂದು ಅನ್ನಬೇಕು..!


ಪಕ್ಕು ಮಾಮಾ: ಎಲ್ಲರಿಗೂ ನಂದೇ "ಚಪಾತಿ"...!!??


ಆತ: ಹಂಗ್ ಹೇಳಬೇಡಿ, ನಮಗೆ ನಿಮ್ದೆ..........


ತಲೆಕೆಟ್ಟು... ಮೊಬೈಲ್ ಆಫ್ ಮಾಡಿ ತಲೆ ತಲೆ ಚೆಚ್ಚಿಕೊಂಡ..

ಪಾಪ ನಮ್ಮ 'ಪಕ್ಕು ಮಾಮಾ' ..!!


***** ***** *****

ಕೆಲವು ಸಂಬಂಧಗಳು ಹೇಗೆ ಆಗ್ತವೆ.?

ಬಾಳ ಪಯಣದಿ ಕೆಲವರು ನಮಗೆ ಹೇಗೆ ಸಿಕ್ಕಿದರು ಯಾಕೆ ಸಿಕ್ಕಿದರು,

ಅನ್ನೋ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟ.

ಉತ್ತರ ಹುಡುಕುವುದು ಬೇಕಾಗಿಲ್ಲ ಅನ್ನೋ ಹಾಗಿರ್ತಾವೆ.

ಆ ಸಂಬಂಧದಲ್ಲಿನ ಪ್ರೀತಿ, ಭಾವನೆಗಳಿಗೆ ಮಾತು ಸೋಲುತ್ತವೆ.!

ಅಂತಹುದೊಂದು ಸಂಬಂಧ ನಮ್ಮದು ಮತ್ತು ಪ್ರಕಾಶ್ ಮಾಮಾನದು.

"ಇಟ್ಟಿಗೆ ಸಿಮೆಂಟ್' ನ "ಪ್ರಕಾಶ್ ಹೆಗಡೆ" ..!!

ಅವರ "ಹೆಸರೇ ಬೇಡ.." ಪುಸ್ತಕದಿಂದ ಅವರ ಬ್ಲಾಗಿನ ಪರಿಚಯವಾದದ್ದು,

ಒಂದು-ವರೆ ವರ್ಷದ ಹಿಂದೆ..!

ಮೊದಲ ಸಲ ಮಾತಾಡಿದಾಗ 'ಮಾಮಾ' ಅಂದೆ ಯಾಕೆ ಅಂತ ಗೊತ್ತಿಲ್ಲ..!

ನಾವಿಬ್ರು ಅವರಿಗಿಂತ ತುಂಬಾ ಚಿಕ್ಕವರು, ಆದರು ನಮ್ಮಲ್ಲಿ ಒಂದು ಗೆಳೆತನ ಇದೆ.. ಪ್ರೀತಿ ಇದೆ. ಬಿಡುವಿದ್ದಾಗ ಭೇಟಿ ಆಗ್ತೇವೆ. ಯಾವುದೋ ರಸ್ತೆಯ ಟೀ ಅಂಗಡಿಯಲ್ಲಿ,

ಜಯನಗರದ ಬಿ.ಡಿ.ಏ. ಕಾಂಪ್ಲೆಕ್ಸ್ ಕಟ್ಟೆಯ ಮೇಲೆ ಕುಳಿತು

ಯಾವುದೋ ಕಾಲದ ಗೆಳೆಯರಂತೆ ಹರಟಿದ್ದೇವೆ.

ಸಿನಿಮಾ ಹೋಗಿದ್ದೇವೆ..

ಹಾಗು ಜೀವನದ ದಾರಿಯಲ್ಲಿ ಎದುರಾಗುವ ಕೆಲವು ವಿಷಯಗಳ ಬಗ್ಗೆ,

ನಮಗಾಗುವ ಗೊಂದಲಗಳ ಬಗ್ಗೆ ಕೇಳಿದಿವಿ.

ಅದಕ್ಕವರು ತಿಳಿಸಿ ಹೇಳಿದ್ದು ಇದೆ.!


ಸದಾ ನಗು, ಆರೋಗ್ಯಕರ ಹಾಸ್ಯ... ಜೀವನ ಪ್ರೀತಿ..

ಹಾಗು ಬಹು ಮುಖ್ಯವಾಗಿ ನಾವು ಅವರಲ್ಲಿ ನೋಡಿದ್ದು 'ಮಾನವೀಯ ಸಂಬಂಧದ ಮೌಲ್ಯ'.

ಒಂದು ಅಂತರದಲ್ಲಿ ನಾವು ಎಷ್ಟೋ ವಿಷಯಗಳ ಬಗ್ಗೆ ಮಾತಾಡಿದಿವಿ, ಚರ್ಚಿಸಿದ್ದಿವಿ,

ವಾದ ಮಾಡಿದಿವಿ.. ಹಾಗು ನಾವು ಕಲಿತಿದ್ದಿವಿ.

ನಮ್ಮ ಮೇಲೆ ನಮ್ಮ ಕೆಲವು ಯೋಜನೆಗಳಿಗೆ ಪ್ರೋತ್ಸಾಹದ ಜೊತೆ,

ಕಿವಿ ಮಾತು-ಬುದ್ದಿ ಮಾತು ಹೇಳಿದ್ದು, ಮೆಲ್ಲಗೆ ಗದರಿದ್ದು..

"ಏ ಹುಡುಗರ ನಿಮ್ಮದು ತಪ್ಪು ಅಲ್ಲ ನಿಮ್ಮ ವಯಸ್ಸಿನ ತಪ್ಪು,

ಅದಕ್ಕೆ ಮಂಗನಂಗ ಆಡ್ತೀರಾ" ಅಂದಿದ್ದು.


ಎಲ್ಲಿಯೂ ಅತಿಶಯೋಕ್ತಿ ಇಲ್ಲದ ಮಾತು.


ಇವರ ಬ್ಲಾಗಿನಲ್ಲಿ ಬರುವ, ನಾಗು,ಶಾರಿ, ಕುಷ್ಟ.. ನಮಗೆಲ್ಲರಿಗೂ ಆತ್ಮೀಯ.

ಹಾಗೇನೆ ಅಲ್ಲಲ್ಲಿ ಬರುವ ಬದುಕಿನ ಕಹಿ ಅನುಭವಗಳು ಕಲಿಸುವ ಪಾಠ.

ತಮ್ಮ ಬಗ್ಗೆನೇ ತಾವು ಹಾಸ್ಯ ಮಾಡಿಕೊಳ್ಳೋದು ಅದ್ಭುತ. ಹಾಗು ಅದೇ ತಿಳಿ ಹಾಸ್ಯದ ಔತಣ. ಹಾಸ್ಯ ಅಂದಾಗ ಅದು ಬೇರೆಯವರ ಕಾಲು ಎಳೆದೋ, ಇಲ್ಲ ಅಪಹಾಸ್ಯ ಅಲ್ಲ.

ಒಂದು ಆರೋಗ್ಯಕರ ಹಾಸ್ಯ ಇವರದು.

"ಮಿಲ್ತಿ ಹೈ ಜಿಂದಗಿ ಮೇ ಮೊಹಬ್ಬತ್ ಕಭಿ ಕಭಿ" ಎಂತಹ ಅನುಭವ ಹೇಳುವ ಭಾವುಕ.

ಸದಾ ಸಕಾರಾತ್ಮಕವಾಗಿ ಯೋಚಿಸುವ, ನೋಡುವ, ಮಾತಾಡುವ..

'ಪ್ರಕಾಶಣ್ಣ' ನ ಕಂಡರೆ ಎಲ್ಲರಿಗೂ ಏನೋ ಆನಂದ.


ಈಗ ಮತ್ತೊಂದು ಸಂತಸದ ದಿನ ನಮ್ಮ ಪ್ರಕಾಶ್ ಮಾಮಾನದು.

ಅವರ ಎರಡನೇ ಪುಸ್ತಕ

"ಇದೇ ಇದರ ಹೆಸರು"

ಇದೇ ತಿಂಗಳ, ಭಾನುವಾರ ೨೪ ತಾರೀಕು ಬಿಡುಗಡೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿರುವ ವಾಡಿಯ ಸಭಾಂಗಣದಲ್ಲಿ.

ದಯವಿಟ್ಟು ಬನ್ನಿ..

ನಮ್ಮ ಪ್ರಕಾಶ್ ಮಾಮಾ ಅವರ ಪರವಾಗಿ ಹಾಗು ನಮ್ಮ ಪರವಾಗಿ ಆತ್ಮೀಯ ಸ್ವಾಗತ.

ಪುಸ್ತಕ ಬಿಡುಗಡೆಯ ಜೊತೆ ಒಂದಿಷ್ಟು ಹಾಡು, ಹರಟೆ ಹಾಗು ನಗು ನಮ್ಮದಾಗಲಿ.



ನಮಗೆ ಇಲ್ಲಿ ಕೇವಲ ಒಬ್ಬ ಪ್ರಕಾಶ್ ಮಾಮಾ ಅಷ್ಟೇ ಅಲ್ಲ.

ಬ್ಲಾಗ್ ಅಂಗಳಕ್ಕೆ ಬಂದ ಮೇಲೆ ಕೆಲವು ಅಣ್ಣನಂತಹ/ಅಕ್ಕನಂತಹ ಗೆಳೆಯರು..

ಹಿರಿಯರ ಅನುಭವದ ಪಾಠ, ಒಡನಾಟ ದೊರೆತಿದ್ದು ತುಂಬಾ ಖುಷಿ ವಿಷಯ.

ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಇರಲಿ.

ಪ್ರೀತಿ ಬೆಳೆಯಲಿ.

ಅನಿಲ್ ಬೇಡಗೆ & ನಾಗರಾಜ್.ಕೆ.


[ಪಕ್ಕು ಮಾಮನ ಚಾರ್ಲಿ ಚಾಪ್ಲಿನ್ ಚಿತ್ರ ಎಡಿಟ್ ಮಾಡಿದವರು, 'ದಿಗ್ವಾಸ್ ಹೆಗಡೆ'.

ಅವರಿಗೆ ಅನಂತ ಧನ್ಯವಾದಗಳು.]


ಮೊದಲಿನ ಪಕ್ಕು ಮಾಮಾನ ಬಗ್ಗೆ
http://pennupaper.blogspot.com/2010/07/blog-post.html

Apr 12, 2011

"ಟ್ರಾಫಿಕ್ ಜಾಮಿನಲ್ಲಿ ಒಂದು, ಎರಡು, ಮೂರೂ . . ."

ನನಗೆ ಮತ್ತು ನನ್ನ ಕೆಲವು ಫ್ರೆಂಡ್ ಗಳಿಗೆ ಇಂಥದ್ದೊಂದು ಖಯಾಲಿಯಿದೆ - ಫುಟ್ ಪಾತಿನಲ್ಲಿ ಟೀ ಕುಡಿಯುತ್ತಿರುವಾಗ, ಬಸ್ಸಿಗೆ ಅಥವಾ ಇನ್ನೊಬ್ಬ ಫ್ರೆಂಡಿಗೆ ಕಾಯುತ್ತಿರುವಾಗ, ಟ್ರಾಫಿಕ್ ಜಾಮ್ ಆದಾಗ ಸುಮ್ಮನೆ ಒಂದು ಪಂಧ್ಯ ಕಟ್ತೀವಿ. ನಾವು ಸೆಲೆಕ್ಟ್ ಮಾಡಿದ ಕಾರುಗಳನ್ನ,ಹುಡುಗಿಯರನ್ನ ಎಣಿಸುವುದಷ್ಟೇ ಆ ಪಂಧ್ಯದ ಪ್ರೋಸೆಸ್ , ಈವರೆಗೂ ಅಪ್ಪಿತಪ್ಪಿಯೂ ಹುಡುಗರನ್ನ ಎಣಿಸುವ ಬಗ್ಗೆ ಯೋಚನೆ ಮಾಡಿಲ್ಲ .ಕಾರುಗಳಲ್ಲಿ ಇಂಡಿಕಾ, ಮಾರುತಿ,ಸ್ಕೋಡ ಮತ್ತು ಇತ್ಯಾದಿಗಳು; ಹಾಗೆಯೇ ಹುಡುಗಿಯರಲ್ಲಿ ಜೀನ್ಸ್ ಹುಡುಗಿ, ಚೂಡಿದಾರ್ ಹುಡುಗಿ, ಬಿಂದಿ ಹುಡುಗಿ ಮತ್ತು ಇತ್ಯಾದಿಗಳು, ರೋಡಿನುದ್ದಕ್ಕೂ ಹರಿದಾಡುವ ಇವುಗಳಲ್ಲಿ ಒಬ್ಬೊಬ್ಬರು ಯಾವುದಾದರೊಂದನ್ನ ಸೆಲೆಕ್ಟ್ ಮಾಡಿ ಕೌಂಟ್ ಮಾಡ್ತಾಯಿರ್ತಿವಿ ಕಾಯುತ್ತಿರುವ ಬಸ್ ಅಥವಾ ಫ್ರೆಂಡ್ ಬರೋವರ್ಗೂ!

ಇಂಡಿಕಾ: ಒಂದು, ಎರಡು, . . .
ಮಾರುತಿ: ಒಂದು,ಎರಡು, . . .

ಅಥವಾ

ಜೀನ್ಸ್: ಒಂದು, ಎರಡು , . . .
ಚೂಡಿ: ಒಂದು, ಎರಡು, . . . .

ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಈ ಪಂಧ್ಯ ಮುಗಿಯುತ್ತೆ, ಅಷ್ಟರಲ್ಲೇ ಅದು ಮೂಡಿಸುವ ಆನಂದದ ನಗುವಿನ ಮಾತೆ ಬೇರೆ. ಇಲ್ಲಿ ಹೆಚ್ಚು ಕೌಂಟ್ ಇದ್ದವನಿಗೆ ಏನೂ ಮಟಿರಿಯಲಿಷ್ಟಿಕ್ ಲಾಭಯಿಲ್ಲ, ಕಡಿಮೆ ಕೌಂಟ್ ಇದ್ದವ ಏನನ್ನೂ ಕಳೆದುಕೊಳ್ಳುವುದಿಲ್ಲ; ಇಬ್ಬರಿಗೂ ಅದು ಒಂದು ಪುಟ್ಟ ಸಂತೋಷದ ಕ್ಷಣವಷ್ಟೇ . ನಾವು ಕಾರನ್ನ ಯಾವಾಗ ಖರೀದಿಸ್ತಿವೋ ಗೊತ್ತಿಲ್ಲ , ಕೆಲವು ಹುಡುಗಿಯರು ಬಂದು ಹೋದರು ಆದ್ರೆ ಬಾಳಸಂಗಾತಿಯಾಗುವವಳು ಎಲ್ಲಿದ್ದಾಳೋ ಏನೋ ; ಅಸಲಿಗೆ ಅವಳ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಸಹ ಇಲ್ಲ ! ಅದರೂ ಕೌಂಟ್ ಮಾತ್ರ ಬಿಡಲ್ಲ .ನೀವು ಈ ರೀತಿಯ ಪಂಧ್ಯ ಬೆಂಗಳೂರಿನಲ್ಲಿ ಕಟ್ಟಿದ್ರೆ ಬೇಗ ಇಂಡಿಕಾ ಕಾರನ್ನೋ ಅಥವಾ ಜೀನ್ಸ್ ಹುಡುಗಿಯನ್ನೋ ಸೆಲೆಕ್ಟ್ ಮಾಡಿ ನೀವೇ ಗೆಲ್ತೀರ ಯಾಕೆಂದರೆ ಇವೆರಡೂ ರೋಡಿನಲ್ಲಿ ಜಾಸ್ತಿ ಕಾಣಸಿಗ್ತವೆ.

ಫ್ರೆಂಡ್ಸ್ ಜೊತೆ ತಿರುಗಾಡುತ್ತಾ , ಹರಟುತ್ತಾ , ಕಾರಣವಿಲ್ಲದೆ ಏನನ್ನೋ ಹುಡುಕುತ್ತ , ಯಾವುದೋ ಹುಡುಗಿ ಯಾವುದೋ ಕಾರಣಕ್ಕೆ ಕಿಸಕ್ ಅಂತ ನಕ್ಕಾಗ ಸಂಬ್ರಮಿಸುತ್ತಾ ಸುತ್ತಮುತ್ತಲಿರುವ ಪಾನಿಪುರಿ, ಟೀ ಸ್ಟಾಲ್, ಚಾಟ್ಸ್ ಸೆಂಟರ್ , ಲೇಡಿಸ್ ಹಾಸ್ಟೆಲ್ (ಹೊರಗಡೆ ), ಬ್ಯಾಚುಲರ್ಸ್ ರೂಮ್ (ಒಳಗಡೆ ), ಲೇಟ್ ನೈಟ್ ಕ್ಯಾಂಟೀನ್ ಗಳಲ್ಲಿ ನಡೆಯುವ ಚಿಕ್ಕ ಚಿಕ್ಕ ಇನ್ಸಿಡೆಂಟ್ ಗಳನ್ನ ಎಂಜಾಯ್ ಮಾಡ್ತೀವಿ . ಅಷ್ಟಾಗಿ ಜನರಿರದ ಜಾಗ, ಸಂಜೆ ಗಾಳಿ , ಬಿಸಿ ಬಿಸಿ ಮಿರ್ಚಿ -ಟೀ , ಸ್ವಲ್ಪ ದೂರದಲ್ಲಿ ಕುಳಿತು ಆಪ್ತತೆ,ಸಲುಗೆಯಿಂದ ಮಾತಾಡುವ ವೃದ್ದ ದಂಪತಿಗಳು, ಕೆಲವು ಪ್ರೇಮಿಗಳ ಹುಸಿ ಕೋಪದಾಟ, ಜಗಳ, ಅಹಂ, ಎಂಜಲನ್ನ ಹಂಚಿಕೊಳ್ಳುವ ಪರಿ, ಮತ್ತಷ್ಟು ಮತ್ತಷ್ಟು; ಹೀಗೆ ಸಾಧ್ಯವಾದಷ್ಟು ಎಲ್ಲ ಸಂಗತಿಗಳನ್ನ ಆಸ್ವಾಧಿಸುವ ಪ್ರಯತ್ನ ಸಾಗುತ್ತಲೇಯಿರುತ್ತೆ.

ಎಲ್ಲ ಅಂದ -ಚೆಂದಗಳ ನೋಡುತ್ತ,ಕೇಳುತ್ತ ಇನ್ನೇನು 'ಲೈಫ್ ಈಸ್ ಬ್ಯೂಟಿಫುಲ್' ಅಂದು ಮುಗಿಸುವಷ್ಟರಲ್ಲಿ ನಮ್ಮ ಕಣ್ಣೆದುರಿಗೆ ಘಟಿಸಿಬಿಡುವ ಅಸಭ್ಯ,ಅಸಹಜ,ಅಶ್ಲೀಲ ಘಟನೆಗಳು ನಮ್ಮನ್ನ ಕದಡಿಬಿಡುತ್ತವೆ, ನಾವು ಅಸಹಾಯಕತೆ ಎಂಬ ಹೆಬ್ಬಾಗಿಲ ಮುಂದೆ ಮಂಡಿಯೂರಿ ಕೂತುಬಿಟ್ಟಿರ್ತಿವಿ. ನಮಗೆ ಆಗ ಏನೂ ಮಾಡೋಕಾಗಲ್ಲ ಮ್ಯಾಕ್ಸಿಮಮ್ ಅಂದ್ರೆ 'ಛೇ', 'ಥೂ' ಅನ್ನಬಹುದು. ಈ ರೀತಿಯೂ ಆಗುತ್ತೆ ಅಂತ ನಮಗೊಂದು ಸಣ್ಣ ಉಹೆ ಕೂಡ ಇರಲ್ಲ, ಆದ್ರೆ; ಅಂತದೊಂದು ಇನ್ಸಿಡೆಂಟ್ ಗೆ ಅನಾಮತ್ತು ಸಾಕ್ಷಿಯಾಗಿಬಿಡ್ತೀವಿ. ದಾಖಲೆಗಳಿರುವುದಿಲ್ಲ!

ಘಟನೆ ೧ : ಸಿಲ್ಕ್ ಬೋರ್ಡ್-ಬೆಂಗಳೂರು; ಅಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು,ಸುಮ್ಮನೆ ರೋಡಿನ ಒಂದು ಪಕ್ಕ ನಿಂತು ಗಮನಿಸುತ್ತಿದ್ದೆ.'ಈ ಟ್ರಾಫಿಕ್ ನಲ್ಲಿ ಕಾರು-ಗೀರು ಬೇಕಾ? ಬಿಎಂಟಿಸಿ ಬಸ್ ಬೆಷ್ಟು'ಅಂದುಕೊಳ್ಳುತ್ತಿದ್ದೆ. ನಿಮಗೆಲ್ಲ ಗೊತ್ತಿರೋ ಹಾಗೆ ಆ ಟ್ರಾಫಿಕ್ ನಲ್ಲೇ ಬಲೂನುಗಳನ್ನ, ಪ್ಲಾಸ್ಟಿಕ್ ಬೊಂಬೆಗಳನ್ನ ಮಾರಾಟ ಮಾಡ್ಲಿಕ್ಕೆ ಕೆಲವು ಮಕ್ಕಳು ಬರ್ತಾರೆ. ಹಾಗೆ ಕೈಯ ತುಂಬ ಬಲೂನು ಹಿಡಿದು ಮಾರಲಿಕ್ಕೆ ಬಂದ ಸುಮಾರು ಹತ್ತು ವರ್ಷದ ಹುಡುಗನಿಗೆ ಕಾರಿನಲ್ಲಿ ಕೂತವಳು ಎರಡು ಮಾತು ಬೈಯ್ದಿದ್ದರೂ, ತನ್ನ ಪಾಡಿಗೆ ತಾನು ಸುಮ್ಮನೆ ಕೂತಿದ್ದರೂ, ಡೋರ್ ಗ್ಲಾಸ್ ಮೇಲೇರಿಸಿಕೊಂಡಿದ್ದರೂ ನಾನಿದನ್ನ ಬರೆಯುತ್ತಿರಲಿಲ್ಲ. ಕಾರಿನಲ್ಲಿ ಕೂತಿದ್ದ ಆಕೆ ಮಾಡಿದ್ದೇನು ಗೊತ್ತ?-ತಾನು ಧರಿಸಿದ್ದ ಕೆಂಪು ಬಣ್ಣದ ಟೀ -ಶರ್ಟ್ ಅನ್ನು ಮೇಲಕ್ಕೆತ್ತಿ, ಬ್ರಾ ಮುಚ್ಚಿದ ಸ್ತನಗಳನ್ನ ತೋರಿಸಿದಳು ಇನ್ನು ಹತ್ತು ಮೀರದ ಆ ಹುಡುಗನಿಗೆ. 'ಹೆಣ್ಣನ್ನ ಪೂಜಿಸುವಲ್ಲಿ ದೇವತೆಗಳಿರುತ್ತಾರೆ' ಅನ್ನೋ ಮಾತಿದೆ ಆದರೆ 'ಎಂಥಹ ಹೆಣ್ಣನ್ನ ಪೂಜಿಸಬೇಕು?' ಬಹುಶಃ ಇದು ಅವರವರ ಭಾವಕ್ಕೆ, ಬಕುತಿಗೆ ಬಿಟ್ಟ ವಿಚಾರ.

ಘಟನೆ ೨ : ವೆಸ್ಟ್ ಆಫ್ ಕಾರ್ಡ್ ರೋಡ್-ಬೆಂಗಳೂರು; ವಿಜಯನಗರದಿಂದ ರಾಜಾಜಿನಗರಕ್ಕೆ ಸಿಟಿ ಬಸ್ಸಿನಲ್ಲಿ ಹೋಗ್ತಾಯಿದ್ದಾಗ ಜೊತೆಗೆ ಯಾವ ಫ್ರೆಂಡ್ ಇರಲಿಲ್ಲವಾದ್ದರಿಂದ ಕಿಟಕಿಗೆ ತಲೆಯೋರಗಿಸಿ ಕೂತಿದ್ದೆ. ಒಂದು ಟ್ರಾಫಿಕ್ ಸಿಗ್ನಲ್ ನಲ್ಲಿ ಹಸಿರು ನಿಶಾನೆಗಾಗಿ ನಿಂತಿತು ಬಸ್. ಸರಿಯಾಗಿ ಕೂತು ಬಾಲ್ಕನಿಯಿಂದ ಕೆಳಗೆ ನೋಡಿದಂತೆ ಕಿಟಕಿಯಿಂದಾಚೆ ಕಾಣುವ ಕಾರುಗಳನ್ನ ನೋಡ್ತಾಯಿದ್ದೆ, ಕಾರಿನ ಡ್ರೈವಿಂಗ್ ಸೀಟಿನಲ್ಲಿರುವ ವ್ಯಕ್ತಿಯ ಕಾಲು, ಹೊಟ್ಟೆಯ ಭಾಗ ಮಾತ್ರ ನನಗೆ ಕಾಣುತ್ತಿತ್ತು . ಹಾಗೆ ಕಾರುಗಳನ್ನ ನೋಡುತ್ತಿರುವಾಗಲೇ ; ಕೆಲವು ವಸ್ತುಗಳನ್ನ ಮಾರಲು ಬಂದ ಅಪ್ರಾಪ್ತ ಹುಡುಗಿಗೆ ಕಾರಿನಲ್ಲಿ ಕೂತ ಗಡವ ಪ್ಯಾಂಟಿನ ಜಿಪ್ಪೆಳೆದು ತನ್ನ ಗುಪ್ತಾಂಗ ತೋರಿಸುತ್ತಿದ್ದದ್ದನ್ನ ನೋಡಿದೆ. ನನ್ನ ಅಂದಾಜಿನ ಪ್ರಕಾರ ಆ ಅಮಾಯಕ ಹುಡುಗಿಗೆ ಹೆಚ್ಚು ಅಂದ್ರೆ ಹದಿನೈದು ವರ್ಷ ವಯಸ್ಸಿರಬಹುದು.

ಮನೋವಿಕಾರತೆಯನ್ನು ತೋರ್ಪಡಿಸುವ ಈ ಎರಡು ಘಟನೆಗಳನ್ನ ನಾನು ಕಣ್ಣಾರೆ ನೋಡಿದ್ದೇನೆ. ಸ್ತನಗಳನ್ನ ತೋರಿಸಿದ ಹೆಣ್ಣು ಮತ್ತು ತನ್ನ ಗುಪ್ತಾಂಗ ತೋರಿಸಿದ ಗಂಡು ಇಬ್ಬರೂ ಕಾರಿನಲ್ಲಿದ್ದರು ಅಂದ್ರೆ ಅವರು ತಕ್ಕ ಮಟ್ಟಿಗೆ ಒಳ್ಳೆಯ ವೃತ್ತಿಯಲ್ಲಿರುತ್ತಾರೆ, ಸಾರ್ವಜನಿಕ ರಸ್ತೆಗಳಲ್ಲಿ ಹೀಗೆ ಅಸಭ್ಯವಾಗಿ ವರ್ತಿಸುವ ಇವರು ತಾವು ಕೆಲಸ ಮಾಡುವಲ್ಲಿ ಹೇಗಿರ್ತಾರೆ? ತಮ್ಮ ಮನೆಗಳಲ್ಲಿ ಹೇಗಿರ್ತಾರೆ? ಇವರ್ಯಾಕೆ ಹೀಗೆ? ಆ ಎಳೆ ಮಕ್ಕಳ ಮೇಲೆ ಇದೆಂತಹ ಕಾಮದರ್ಪ? ಆ ಮಕ್ಕಳ ಮನಸಿನ ಮೇಲೆ ಇದೆಂತಹ ಪರಿಣಾಮ ಬೀರುತ್ತೆ? ಆ ಮಕ್ಕಳು ವಸ್ತುಗಳನ್ನ ಮಾರಲು ಬಂದಾಗ ಹೀಗೆ ಅಸಭ್ಯವಾಗಿ,ಅಶ್ಲೀಲವಾಗಿ ವರ್ತಿಸುವ ಅವಶ್ಯಕತೆ ಇತ್ತಾ?

ತಲ್ಲಣ, ಅಶ್ಲೀಲತೆ, ಯೋಚನೆ , ಕನಸು, ಆನಂದ, ಕಣ್ಣೀರು, ಮೊದಲ ಭೇಟಿ, ತಿರಸ್ಕಾರ, ಬೇರೊಬ್ಬನೊಂದಿಗೆ ಅವಳ ಮದುವೆ, ಗೆಳೆಯರ ಗುಂಪು, ಟೀ - ಸಿಗರೇಟು, ಅವಳನ್ನ ಅದೆಷ್ಟೇ ಮರೆತೆನೆಂದರೂ ನೆನಪಾಗುವ ಬಚ್ಚಿಟ್ಟುಕೊಂಡ ಅವಳ ಫೋಟೋ, ಪ್ರತಿಬಾರಿ ಬೇರೆಯದೇ ಮುಖ ತೋರಿಸುವ ಜಗತ್ತು -ನಾಗರೀಕ ಸಮಾಜ, 'ನೀನು ಅಸಹಾಯಕ ' ಅಂತ ಸಾರಿ ಹೇಳುವ ಬದುಕು ; ತಲೆಯ ತುಂಬಾ ಚಿತ್ರ -ವಿಚಿತ್ರ ಭಾವಗಳ ಟ್ರಾಫಿಕ್ ಜಾಮ್.

ಇದೆಲ್ಲದರ ನಡುವೆ ; ಜೊತೆಗೆ ಓದಿದ ಹುಡುಗಿಯ ಮದುವೆಯಲ್ಲಿ ಸಡಗರದಿಂದ ಅಕ್ಷತೆ ಹಾಕುವ ಕೈಗಳ ಮಧ್ಯ ಶಕ್ತಿಗುಂದಿದ, ನಿರಾಶೆಗೊಂಡ ಗೆಳೆಯನ ಕೈಯೊಂದನ್ನ ನೋಡಿದ ಕೂಡಲೇ ಕರುಳು ಹಿಂಡಿದ ಅನುಭವ. ಹಾಡದೆ ಉಳಿದ ಗೆಳೆಯನ ಯಶಸ್ವಿಯಾಗದ ಪ್ರೇಮಗಾನದ ಆಲಾಪನೆಯಲ್ಲಿಯೇ; ಅವಳು ಈಗ ತಾನೇ ತಾಳಿ ಕಟ್ಟಿದ ಸಂಗಾತಿಯೊಂದಿಗೆ ಪಯಣಿಸುವ, ಗುಲಾಬಿ ಹೂವಿನಿಂದ ಅಲಂಕೃತಗೊಂಡ ಸ್ಕೋಡ ಕಾರಿನ ಹತ್ತಿರವೇ ನಡೆದು ಹೋಗಿ ಮತ್ತದೇ ಸಿಟಿ ಬಸ್ಸಿಗಾಗಿ ಕಾಯುತ್ತಾ ನಿಲ್ಲುವ ಮುನ್ನ- ಗೆಳೆಯ ಕಡೆಯ ಸಲ ಎಂಬಂತೆ ಕಲ್ಯಾಣ ಮಂಟಪವನ್ನೊಮ್ಮೆ ತಿರುಗಿ ನೋಡಿದ. 'ಸಾಕು ಬಾ ' ಎಂಬರ್ಥದಲ್ಲಿ ಅವನ ಭುಜದ ಮೇಲೆ ಕೈ ಹಾಕಿ ರೋಡಿನ ಕಡೆ ತಿರುಗಿಸಿಕೊಳ್ಳುವಾಗ ನನ್ನ ಕಣ್ಣೂ ಹಸಿ .

ಅದೆಷ್ಟೇ ಕಷ್ಟ ಆದರೂ, ಅದೆಷ್ಟೇ ಅಂದ -ಚೆಂದ ಅಥವಾ ಅಸಭ್ಯವೋ, ಅಸಹಜವೋ ಕಂಡರೂ ನಾವು ಒಂದು ಹನಿ ಸಂತೋಷಕ್ಕಾಗಿ ಮೋಡಕ್ಕೆ ನಾಲಿಗೆ ಚಾಚ್ತೀವಿ, ಕಣ್ಣು ತೆರೆದು ಕರೀತಿವಿ -'ನೀನು ಬಾ , ಗೆಳೆಯ '.
ಮತ್ತೆ ಮತ್ತೆ ಕೌಂಟ್ ಮಾಡ್ತೀವಿ -

ಇಂಡಿಕಾ: ಒಂದು, ಎರಡು, ಮೂರು. . .
ಮಾರುತಿ: ಒಂದು,ಎರಡು, ಮೂರು. . .

Mar 30, 2011

"ರೆಕ್ಕೆ ಬಿಚ್ಚಿತಷ್ಟೆ"--> ಕೈಜಾರುತಿದೆ ಲೇಖನಿ, ನಿದಿರೆಗೆ ಸೋತು. ನಡೆಯುತಿದೆ ಒಳಗೆ ನಿಚ್ಚಳವಾಗಿ ಕಣ್ತೆರೆಸುವ ಕಸರತ್ತು - ಸಡಿಲಾಗದ ಪಟ್ಟು. ಬೆರಳ ಬಿಸುಪಿಗೂ ನಿಲ್ಲುತ್ತಿಲ್ಲ ಲೇಖನಿ, ಮಲಗಲು ಸಾಯುತಿದೆ ನನ್ನೊಬ್ಬನನ್ನೇ - ಪರದಾಡಲು ಬಿಟ್ಟು. ಇದು ಇಷ್ಟ, ಆದರೂ ಕಷ್ಟ! ಮೈಯ ಬಿಚ್ಚಿಟ್ಟು, ಲೇಖನಿಯ ಕಾಯಲೇಬೇಕು ಕಾವು ಕೊಟ್ಟು; ಆಳಕಿಳಿದರೆ ಸಿಕ್ಕೀತು ನುಡಿಗಟ್ಟು. ಬರೆಯಬೇಕಾದದ್ದು ಸ್ಪಷ್ಟ - ಕೊಡಬೇಕಾದ ಮುತ್ತಿನಂತೆ. ಮುನಿದು ಜಾರಿದರೇನು ಲೇಖನಿ, ಅದು ಮುಂಜಾವಿಗೆ ಕೈಸೇರುವ ಹನಿ - ಅದೃಷ್ಟ. ಶೀಘ್ರಸ್ಖಲನವಾಗುವುದೇನೋ ? - ಆದರೇನು ? ಜಾರದು ಪದ, ಹದ್ದು ಮೀರದು ಹದ - ಮೊದಲೇ ರೆಕ್ಕೆ ಬಿಚ್ಚಿತಷ್ಟೆ ! !

Mar 17, 2011

ನನ್ನ ಅಜ್ಜಿ ಸಾತವ್ವ..


ಮೊನ್ನೆ ಮೊನ್ನೆ, 'ಮಹಿಳಾ ದಿನಾಚರಣೆ' ಆಯ್ತು.
ಒಬ್ಬ ಮಹಿಳೆ/ಹೆಣ್ಣು, ಒಬ್ಬ ಮನುಷ್ಯನ ಜೀವನದಲ್ಲಿ, ಒಂದು ಸಂಸಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ..

ಹೆಣ್ಣು ಒಂದು ಶಕ್ತಿ ಅಂತಾರೆ,
ಒಬ್ಬ ಗಂಡಿನ ಜೀವನದಲ್ಲಿ, ಆದರ್ಶ ಮಹಿಳೆ ಅಂತ ಒಬ್ಬಳು ಇದ್ದೆ ಇರ್ತಾಳೆ ಅನ್ನೋ ನಂಬಿಕೆ ನನ್ನದು.
ಅದು, ಅಮ್ಮ, ಅಕ್ಕ-ತಂಗಿ, ಗೆಳತಿ, ಪತ್ನಿ, ಮಗಳು..
ಮೊನ್ನೆ ಮಹಿಳಾ ದಿನಾಚರಣೆ ದಿನ ಸುಮ್ನೆ ಯೋಚನೆ ಮಾಡಿದೆ, ನನ್ನ ಜೀವನದಲ್ಲಿ ಅಂತಹ ಹೆಣ್ಣು ಯಾರು.?
ತುಂಬಾ ಯೋಚನೆ ಮಾಡಿದ ಮೇಲೆ ಅನಿಸಿದ್ದು. ಅಜ್ಜಿ..!
ನನ್ನ ಅಜ್ಜಿ ಸಾತವ್ವ ..

'ಸಾತವ್ವ-ರೇವಪ್ಪ' ದಂಪತಿಗಳ ದೊಡ್ಡ ಸಂಸಾರ, ೯ ಮಕ್ಕಳು. ಎಂಟು ಗಂಡು ಒಂದು ಹೆಣ್ಣು.
ಅವರ ಏಳನೇ ಮಗನ ಹಿರಿಮಗನೇ ನಾನು.
ಸದ್ಯಕ್ಕೆ ನನ್ನ ಅಜ್ಜಿ ಬಗ್ಗೆ ನಿಮಗೆ ಹೇಳಬೇಕು..






ನನ್ನ ಅಜ್ಜ ಮೌನಿ, ತಾನಾಯ್ತು ತನ್ನ ಕೆಲಸ ಆಯ್ತು.
ಚಟ ಅಂತ ಇದ್ದದ್ದು ಎರಡೇ ಎರಡು. ಒಂದು ಚಹಾ ಇನ್ನೊಂದು ಕಲ್ಲಸಕ್ರೆ..!
ಅಜ್ಜಿ ಮಾತು ಆದ್ರೆ, ಹರಟೆ ಅವಳದಲ್ಲ..!
ಇದ್ದ ಸ್ವಲ್ಪ ಜಮಿನಿನಲ್ಲೇ ಕಷ್ಟ-ಸುಖ ಎರಡು ಇದ್ದವು, ಆದ್ರೆ ಅಜ್ಜಿದು ಗೊಣಗೋ ಜಾಯಮಾನ ಅಲ್ಲ.
ದುಡಿಯೋ ಹೆಣ್ಣು. ಹೊಲದಲ್ಲಿ ಕೆಲಸ ಮಾಡಿದ್ರು ಅವಳದ ನಿಜವಾದ ಕೆಲಸ ಮನೆ.
ಇದ್ದ ೯ ಮಕ್ಕಳಲ್ಲಿ ಒಬ್ಬಳೇ ಮಗಳು. ನನ್ನ ಸೋದರತ್ತೆ. ೧೨ ವಯಸ್ಸಿನಲ್ಲಿ ಕಣ್ಣು ಹೋಯಿತು, ಕಾರಣ ಗೊತ್ತಾಗ್ಲಿಲ್ಲ.
ಮಗಳು ವಯಸ್ಸಿಗೆ ಬರೋ ದಿನದಲ್ಲಿ ಹೀಂಗ್ ಆಯ್ತಲ್ಲ ಅಂತ ಕುಡಲಿಲ್ಲ,
ಮಗಳಿಗೆ ಕೆಲಸ ಕಲಿಸಿದಳು ಅಜ್ಜಿ.!
ಮುಂದೆ ಕೆಲವು ವರ್ಷ ಎಲ್ಲವು ಚೆನ್ನಾಗಿತ್ತು.ಆದ್ರೆ ಒಂದಿನ ಮಗಳು ತಿರಿಹೊದಳು. ಮೊದಲ ಆಘಾತ.
ಆದರೂ ಗಟ್ಟಿಗಿತ್ತಿ,ತನ್ನ ಎಂಟು ಮಕ್ಕಳ ಬೆಳೆಸೋ ಜವಾಬ್ದಾರಿ ಹೊತ್ತಳು. ಅಜ್ಜ ಹೊಲ ಅಜ್ಜಿ ಮನೆ.

ತನ್ನ ಹಿರಿ ಮಗ ಓದಬೇಕು ಅಂತ ದೊಡ್ಡ ಆಸೆ, ಆದ್ರೆ ಆವಾಗ ಎಲ್ಲಿದ್ದವು ಶಾಲೆ..?
ಆದರು ಬಿಡಲಿಲ್ಲ ಹಿರಿಮಗನಿಗೆ ತನ್ನ ತವರಿಗೆ ಕಳಿಸಿದಳು, ತನ್ನ ತಮ್ಮನ ಮಕ್ಕಳ ಜೊತೆ ಬಿಟ್ಟು ಬಂದಳು. ಮಹಾರಾಷ್ಟ್ರದಲ್ಲಿ..!
ನನ್ನ ಅಜ್ಜಿ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದಲ್ಲಿ, ಆದ್ರೆ ಕನ್ನಡ ಮಾತೃ ಭಾಷೆ. ಅಜ್ಜನದು ಕರ್ನಾಟಕ, ಕನ್ನಡ.

ಮುಂದೆ ಊರಲ್ಲೇ ಶಾಲೆ ತೆರೆಯಿತು, ಆದ್ರೆ ಎಲ್ಲ ಮಕ್ಕಳು ಓದಲಿಲ್ಲ.
೩ ಮಕ್ಕಳು ಓದಿದರು ಉಳಿದ ೪ ಮಕ್ಕಳು ಸ್ವಲ್ಪ ಓದಿ ಹೊಲದ ದಾರಿ ಹಿಡಿದರು. ಅಜ್ಜಿಗೆ ಬೇಜಾರಿಲ್ಲ.
ಮಕ್ಕಳು ದುಡಿದು ತಿನ್ನಬೇಕು ಅಷ್ಟೇ..!
ಎಂಟು ಜನರಲ್ಲಿ ನಾಲ್ಕು ಜನ ವಿವಿಧ ಕೆಲಸದಲ್ಲಿ ಬೇರೆ ಊರು ಸೇರಿದರು, ನಾಲ್ಕು ಜನ ಊರಲ್ಲಿದಾರೆ.

ಮುಂದೆ ಮಕ್ಕಳ ಮದುವೆ, ಮೊಮ್ಮಕ್ಕಳು.. ಇದ್ದ ಜಮೀನು ಜಾಸ್ತಿ ಆಯ್ತು, ದೊಡ್ಡ ಸಂಸಾರ..
ಬೇರೆ ಊರಲ್ಲಿದ್ದ ಮಕ್ಕಳು ಹುಟ್ಟೂರು ಮರೆಯಲಿಲ್ಲ.

ಇಷ್ಟೆಲ್ಲಾ ಆದರೂ ಮನೆಯಲ್ಲಿ ಯಾವುದೇ ವಿಷಯಕ್ಕೆ ಇಲ್ಲಿ ತನಕ ಜಗಳ ಮುನಿಸು ಯಾವುದು ಇಲ್ಲ.!
ಭಿನ್ನಾಭಿಪ್ರಾಯಗಳು ಹಲವು ಸಲ ಬಂದಿದೆ, ಹಾಗೆ ಹೋಗಿದೆ.
ಮುಂದೆ ಮಕ್ಕಳಿಗೆ ಪಾಲು ಮಾಡಲಿಲ್ಲ ಅಜ್ಜಿ. ತಮ್ಮ ಇದು ನಿಂದು ಇದು ನಿಂದು. ಅಷ್ಟೇ.
ಒಬ್ಬೆ ಒಬ್ಬ ಮಗ ನನಗೆ ಇದು ಬೇಡ, ಅದೇ ಬೇಕು. ಇನ್ನಷ್ಟು ಬೇಕು..? ಊಹು..!
ಒಬ್ಬೆ ಒಬ್ಬ ಮಾತಾಡಿಲ್ಲ, ಅದಕ್ಕೂ ಕಾರಣ ಅಜ್ಜಿ. ಅವಳಮಾತೆ ಹಾಗೆ.

ತೀರ ಬಡತನ ನೋಡಿದಾಳೆ, ಕೈ ತುಂಬಾ ದುಡ್ಡು ಬಂತು, ಸೊಸೆಯಂದಿರು ಬಂದರು. ಅಜ್ಜಿ ಬದಲಾಗಲಿಲ್ಲ.
ಸೊಸೆಯಂದಿರು ಒಂದೇ ಒಂದು ದಿನ ಜಗಳ ಮಾಡಲಿಲ್ಲ. ಎಂಟೂ ಜನ..!
ನನ್ನ ಅಜ್ಜಿ, ಸೊಸೆಯಂದಿರಿಗೆ ಸೊಸೆ ಅನ್ನಲಿಲ್ಲ, ನನ್ನ ಹೆಣ್ಣ್ ಮಕ್ಳು ಅಂದ್ಲು. ಅವಳು ಅತ್ತೆ ಆಗಲಿಲ್ಲ, ಅವ್ವ ಆದಳು.

***
ಒಬ್ಬರ ನ್ಯುನ್ಯತೆ, ಅಂಗವೈಕಲ್ಯ ದ ಬಗ್ಗೆ ಮಾತಾಡಿದ್ರೆ ಅಜ್ಜಿ ಯ ಸಿಟ್ಟು ಭಯಂಕರ.
ಊರಲ್ಲಿ ಒಬ್ಬ ಕಿವುಡ ಇದ್ದ ಶರಣಪ್ಪ ಅಂತ. ಮನೆಯಲ್ಲಿ ಯಾರಾದ್ರು, ಹೇಯ್ ಅವ ಕಿವುಡ ಶರಣಪ್ಪ್....
ಅಂತ ಏನಾದ್ರೂ ಅಂದರೋ, ಅವತ್ತಿನ ಅವರ ನಸೀಬು ಖರಾಬು.!
ಇನ್ನೊಬ್ಬನಿದ್ದ ರಾಜು, ಒಂದು ಕಾಲಿಂದ ಅಂಗವಿಕಲ. ಅವನಿಗೆ, ಕುಂಟ ರಾಜ.......ಅಂದರೋ ಅವರ ಕಾಲು ಮುರಿದಂಗೆ..!!

"ಯಾಕ್ ಹಾಂಗ್ ಕರಿತಿರೋ ಖೋಡಿಗೋಳ್ಯಾ.?
ದೇವರು ಅವರಿಗ ಹಂಗ ಮಾಡ್ಯಾನ.
ನಿಮ್ಮ ಕೈಲಿ ಚೊಲೋ ಮಾಡಕ್ಕ ಆಗಂಗಿಲ್ಲ.
ಅವರ ಅಪಂಗತನ ಅವರಿಗ ಮತ್ತ ಮತ್ತ ನೆನಪ ಮಾಡಿ ಯಾಕ್ ಅವರ ಮನಸಿಗ ಬ್ಯಾಸರ ಮಾಡ್ತೀರಿ..?"
ಗೌಡ್ರ ಶರಣಪ್ಪ, ಕುಂಬಾರ ರಾಜು ಅಂತ ಕರದರ ನಿಮ್ಮ ಬಾಯಿಗ ಏನರ ಬ್ಯಾನಿ ಏನು..?

**
ಜಾತಿ:
ಅಜ್ಜಿ ಯಾವತ್ತಿಗೂ ಜಾತಿ ನೋಡಲಿಲ್ಲ.
ಕಳೆದ ೩೦ ವರ್ಷಗಳಿಂದ ದೊಡ್ಡಪ್ಪನ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿರುವ 'ಮಕಬುಲ್ ಚಾಚಾ' ಗು ಅವಳು ಅವ್ವ.

ಗಂಡು ಮೊಮ್ಮಕಳಲ್ಲಿ ೫ ಜನರ ಮದುವೆ ಆಗಿದೆ, ಅದರಲ್ಲಿ ೩ ಜನರ ಪ್ರೇಮ ವಿವಾಹ..!
ತನ್ನ ಹಿರಿಯ ಮಗನ ಮೊದಲ ಮಗ ಸತೀಶ್.
ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೋದಾಗ ಅಲ್ಲಿ ಭಾರತಿಯ ಮೂಲದ ಹುಡುಗಿಯನ್ನು ಇಷ್ಟ ಪಟ್ಟ,
ದೊಡ್ಡಪ್ಪ ಒಮ್ಮೆ ಅಜ್ಜಿನ ಕೇಳಿದರು.
ಅಜ್ಜಿ ಹೇಳಿದಳು; "ತಮ್ಮ, ಯಾವ ಜಾತಿ, ಎಷ್ಟ ಶ್ರೀಮಂತರು ಇವೆರಡು ಬ್ಯಾಡ.
ಹುಡುಗಿ ಮನೆಯವರು ನಾಕ ಮಂದ್ಯಾಗ ಎಂತಹ ಹೆಸರು ಇಟ್ಟಾರ ಅಷ್ಟ ನೋಡು ಸಾಕು..!
ನಾಲ್ಕು ಹೂವಿನ ಜೋಡಿ ಮನಿಗ ಕರ್ಕೊಂಡು ಬಾ."

ಮುಂದೆ ಎಲ್ಲರ ಸಮ್ಮುಖದಲ್ಲಿ ಅಣ್ಣನ ಮದುವೆ ಆಯ್ತು. ಅಂದ ಹಾಗೆ ನನ್ನ ಅತ್ತಿಗೆ ಬಿಹಾರದವರು, ಅವರ ತಂದೆ ವೈದ್ಯರು.
ಇನ್ನೊಬ್ಬ ಅತ್ತಿಗೆ 'ಪಂಜಾಬಿನವರು' ಮತ್ತೊಬ್ಬರು ನಮ್ಮ ಜಿಲ್ಲೆಯವರೆ.

ನಮ್ಮ ಮನೆಯಲ್ಲಿ ಎಲ್ಲ್ಲರು ಸೇರಿದರೆ, ಅದೊಂದು ಜಾತ್ರೆಯೆ ಸರಿ. ಬಗೆ ಬಗೆಯ ಭೋಜನ..
ಭಾಷೆಗಳೋ, ಕನ್ನಡ, ಮರಾಠಿ, ಹಿಂದಿ, ಪಂಜಾಬಿ, ಬಿಹಾರಿ, ಇಂಗ್ಲಿಷ್..
ನಮ್ಮದು ಒಂದು ತರಹ, ಸಮ್ಮಿಶ್ರ ಸಂಸಾರ :)

***
ಹೆಣ್ಣು ಮತ್ತು ಶಿಕ್ಷಣ:
ಅಜ್ಜಿಗೆ ಓದು ಬರಹ ಗೊತ್ತಿಲ್ಲ.
ಮನೆಯಲ್ಲಿ ಹೇಳುತಿದ್ದ ಮಾತು,
ಹೆಣ್ಣ ಮಕ್ಳು ಓದಬೇಕು ಕೆಲ್ಸಾನು ಮಾಡಬೇಕು ಆದ್ರ, ಹೆಣ್ತನ ಮರಿಬ್ಯಾಡದು ಅಷ್ಟೇ ನೋಡ್ರಿ.!

ಒಂದು ಮಧ್ಯಾನ ದೊಡ್ಡಮ್ಮ ಸುಮ್ನೆ ಕೂತಿದ್ದು ನೋಡಿ; "ತಂಗಿ ಯಾಕ್ ಹಂಗ ಕುಂತಿ..?
ನೋಡವ್ವ ನಾ ಸಾಲಿ ಕಲ್ತಾಕಿ ಅಲ್ಲ, ಆದರೂ ಒಂದು ಮಾತ್ ಹೇಳ್ತೀನಿ.
ಮಧ್ಯಾನ ಹೀಂಗ್ ಸುಮ್ಮನ ಕುಡು ಬದಲಿ, ಅಲ್ಲಿ ಮ್ಯಾಲಿನ ಸಾಲಿಗ ಹೋಗಿ ಹುಡುಗರಿಗ ಏನರ ಹೇಳಿ ಕೊಡು."

ಅಲ್ಲಿಯತನಕ ದೊಡ್ಡಮ್ಮನಿಗೆ ಹೊಳೆಯದಿದ್ದ ವಿಚಾರ ಅಜ್ಜಿಗೆ ಹೊಳೆದದ್ದು ನೋಡಿ ಆಶ್ಚರ್ಯ.
ದೊಡ್ಡಮ್ಮ ತಡ ಮಾಡಲಿಲ್ಲ, ಶಾಲೆಯಲ್ಲಿ ಮಾತಾಡಿ ಬಂದ್ರು.
ಬಿಡುವಿದ್ದಾಗ ಆ ಶಾಲೆಗೆ ಹೋಗಿ ತಮ್ಮ ಇಷ್ಟದ 'ಸಮಾಜ ಶಾಸ್ತ್ರ' ಹೇಳ್ತಾರೆ.
ವಾರಕ್ಕೆ ಮೂರೂ ದಿನ ತೋಟಕ್ಕೂ ಹೋಗ್ತಾರೆ. ಅವರು ಓದಿದ್ದು 'ಬಿ.ಎ.' ೩೦ ವರ್ಷಗಳ ಹಿಂದೆ.

ಇದನ್ನ ನೋಡಿ, ಚಿಕ್ಕಮ್ಮ ಅಕ್ಕ-ಪಕ್ಕ ಮನೆ ಮಕ್ಕಳಿಗೆ ಪಾಠ ಹೇಳಲಿಕ್ಕೆ ಶುರು ಮಾಡಿದರು.

ಇವೆಲ್ಲ ಆದ ಮೇಲೆ ಅಜ್ಜಿಯ ಮೇಲೆ ಸೊಸೆಯಂದಿರ ಪ್ರೀತಿ ಇನ್ನಷ್ಟು ಜಾಸ್ತಿ ಆಯ್ತು.
ಕೆಲವೊಮ್ಮೆ ಮನೆಯಲ್ಲಿನ ಗಂಡಸರ ಕಿವಿ ಮೇಲೆ ಒಂದು ಮಾತು ಬಿಳ್ತಿತ್ತು,
ನಿಮ್ಮ ಅವ್ವಗ ಇರೋ ಬುದ್ದಿ ನಿಮಗಿಲ್ ನೋಡ್ರಿ. :) ಹ ಹ.

--
ತುಂಬಾ ಶ್ರೀಮಂತ ಮನೆತನದ ಪರಿಚಯದ ದಂಪತಿಗಳು ಮನೆಗೆ ಬಂದಿದ್ದರು.
ದಂಪತಿಗಳ ಜೊತೆ, ಎಲ್ಲರ ಹರಟೆ-ಊಟ ನಡಿಯಿತು.
ಸ್ವಲ್ಪ ಹೊತ್ತು ಆದಮೇಲೆ, ಆ ದಂಪತಿಗಳು ಅಜ್ಜಿಯೊಡನೆ ಮಾತಿಗೆ ಕುಳಿತರು. ಒಮ್ಮೆಗೆ ಅಜ್ಜಿ ಅವರ ಪತ್ನಿಗೆ ಬೈಯಲು ಶುರು ಮಾಡಿದರು..!
ಎಲ್ಲರಿಗೂ ಯಾಕೆ ಅಂತ ಗೊತ್ತಾಗಲಿಲ್ಲ,

"ಹಾಲು ಹೆಚ್ಚಾಗಿದ್ರ, ಮೊಸರು, ಮಜ್ಜಗಿ, ತುಪ್ಪ ಮಾಡ್ತಾರ. ಇಲ್ಲ ದೂದ್ಖೀರ್ ಮಾಡ್ತಾರ. ಆದ್ರ ನೀವು ಹಾಲಿಂದ ಕುಂಡಿ ತೊಳ್ಕೋತಿರಿ. ಅಂತ ಮಂದಿ ನೀವು"
ಅಷ್ಟ ಹೆಚ್ಚ ಇದ್ರ ಬಡವರ್ ಮಕ್ಕಳಿಗ ಕೊಡ್ರಿ, ಮನ್ಯಾನ ಬೆಕ್ಕು ನಾಯಿಗ ಕುಡಿಸ್ರಿ, ನೀವು ಕುಂಡಿ ತೊಳ್ಕೋಳೋ ಮಂದಿ..

ಅಜ್ಜಿಯ ಪಿತ್ತ ಈ ಪರಿ ನೆತ್ತಿಗೆರಲು ಕಾರಣ ಅವರ ಪತ್ನಿಯ ಕಾಲುಂಗರ..!
ಅದು ಬಂಗಾರದಾಗಿತ್ತು.!!

ಅಜ್ಜಿಯ ಪ್ರಕಾರ ಬಂಗಾರದ ಕಾಲುಂಗುರ ದೇವಿ ಲಕ್ಷ್ಮಿ, ದೇವತೆಯರು ಮಾತ್ರ ಹಾಕೋಬೇಕು.
ಮನುಷ್ಯರೆನಿದ್ರು ಸೊಂಟದಿಂದ ಮೇಲೆ ಹಾಕಬೇಕು.!
ಕೊನೆಗೂ ಅಜ್ಜಿ ಅವರಿಗೆ ಮನೆಯಲ್ಲಿದ್ದ ಬೆಳ್ಳಿ ಕಾಲುಂಗರ ಹಾಕಿಯೇ ಬಿಟ್ಟಳು.
ಇದು ಅಜ್ಜಿಯ ಸಿಟ್ಟಿನ ಇನ್ನೊಂದು ಮುಖ.

--

ಸಂಭಂದಿಕರೊಬ್ಬರು ಮನೆಗೆ ಬಂದು ತಮ್ಮ ಸೊಸೆಗೆ ಅಬೋಶನ್ ಮಾಡಿಸಿದ್ದು ಹೇಳಿದರು, ಹಂಗಂದ್ರೆ ಶಿಶು ಭ್ರೂಣ ಹತ್ಯೆ ಅಂತ ಅಜ್ಜಿಗೆ ಗೊತ್ತಾಗಲಿಲ್ಲ.
ಆಮೇಲೆ ಅವರು ಅಜ್ಜಿಯ ಜೊತೆ ಕುಳಿತಾಗ ಅಜ್ಜಿ ಕೇಳಿಯೇ ಬಿಟ್ಟಳು, 'ನಿನ್ನ ಸೋಸಿಗ ಏನಾಗ್ಯದ. ಏನ್ ಮಾಡ್ಸಿ..?'

"ಹೊಟ್ಟಿ ತೆಗಿಸಿವಿ, ಮೊದಲಿನ ಮೂರೂ ಹೆಣ್ಣೇ ಅದಾವ ಈಗಿಂದು ಹೆಣ್ಣೇ ಅಂತಂದ್ರು, ಅದಕ್ಕ ಹೊಟ್ಟಿ ತೆಗೆಸಿವಿ."

ಹಾ...? ಅಲಾ ನಿಮ್ಮ ಜನುಮಕ್ಕ್ ಇಷ್ಟು, ನೀವೇನು ಮನುಷ್ಯರಾದಿರಿ..?
ಹೆಣ್ಣ ಅಂತ ಹೊಟ್ಟಿ ತೆಗೆಸ್ತಾರ..?
ಹಂಗಂದ್ರ ನೀ ಇಗ ಹೆಣ್ಣೇ ಆಗಿಯಲ್ಲ ನಿನಗ ಏನ್ ಮಾಡಬೇಕು..?

"ಹೆಣ್ಣಿಗ ಹೆಣ್ಣೇ ಕಿಮ್ಮತ ಕೊಟ್ಟಿಲ್ಲ ಅಂದ್ರ ಗಂಡಸರು ಕೊಡಬೇಕು ಅಂತ ಹ್ಯಾಂಗಂತಿರಿ.?"

"ಒಂದು ಕೆಲ್ಸಾ ಮಾಡು, ಮೊದಲ ನಿಮ್ಮ ಅವ್ವನ ಕುತಗಿ ಒತ್ತು, ಹಂಗೆ ನಿಮ್ಮ ಅತ್ತಿದು.
ಆಮೇಲೆ ನಿನ್ನ ಹೆಣ್ ಮಕ್ಳಿಗ, ಸೋಸೆದಿರಿಗ ಭಾವಿಗ ನೂಕು.
ಮೂರೂ ಮೊಮ್ಮಕಳು ಹೆಣ್ಣೇ ಅಲ್ಲ, ಅವುಕೆಲ್ಲ ವಿಷ ಕುಡ್ಸು. ಕಡೀಗ ನೀ ನೇಣ ಹಾಕೊಂಡು ಸಾಯಿ..!"
ಸಾಯಿ ಹೋಗ್.!!!

ಹೆಣ್ಣ ಯಾಕ್ ಬ್ಯಾಡ ನಿಮಗ.?
"ಮುಟ್ಟು, ಬಸೀರು, ಹಾಲುಣಸೋದು.. ದೇವರು ಹೆಣ್ಣಿಗೇ ಯಾಕ್ ಕೊಟ್ಟಾನ..?
ಅದು ಹೆಂಗಸರ ತಾಕತ್ತು..!!"
ಇಂತ ಭಾಗ್ಯ ಗಂಡಿಗಿಲ್ಲ.
ಇದು ಹೆಂಗಸಿನ ಭಾಗ್ಯ. ಹೆಣ್ಣಾಗಿ ಹುಟ್ಟಬೇಕಂದ್ರ ಪುಣ್ಯ ಮಾಡಿರಬೇಕು.!!

--

ಅಜ್ಜಿಯ ಪ್ರಕಾರ ಒಂದು ಸಂಸಾರದ ಸಂತೋಷಕ್ಕೆ, ಉನ್ನತಿಗೆ ಮುಖ್ಯ ಕಾರಣ ಹೆಣ್ಣು.
ಗಂಡು ಬೆಳಿಗ್ಗೆ ಇಂದ ಸಂಜೆ ತನಕ ದುಡಿತಾನೆ, ಮನೆಗೆ ಬೇಕಾದು ಆ ದುಡಿಮೆಯಿಂದಾನೆ.
ಗಂಡಸಿಗೆ ಪ್ರೀತಿ ಮರಿಯಾದೆ ಕೊಡಬೇಕು. ದುಡಿಯೋ ಜೀವ. ಅದಕ್ಕ ಪ್ರೀತಿ ಬೇಕು.
ಆದ್ರೆ, ಸಂಸಾರ ನಿಭಾಯಿಸೋದು ಮುಖ್ಯವಾಗಿ ಹೆಣ್ಣು..!
ತನ್ನ ಎಂಟು ಸೊಸೆಯಂದಿರಿಗೆ ಹೇಳಿಕೊಟ್ಟದ್ದು ಇದನ್ನೇ.

ಅವಳ "ಕ್ಲಾರಿಟಿ ಆಫ್ ಥಾಟ್ಸ್" ಅದ್ಭುತ.

ಯಾರಾದ್ರು ಮಾತಿಗೆ, ಈಗಿನ ಕಾಲದ ಮಕ್ಳು ಸರಿಯಿಲ್ಲ ಹಂಗೆ ಹಿಂಗೆ ಅಂದ್ರೆ, ಅಜ್ಜಿಯ ನೇರ ಮಾತು, ಕಾರಣ ನೀವೇ..!
ಪಾಲಕರು ಹೇಗೋ ಮಕ್ಕಳು ಹಾಗೆ, ತೀರ ಮುದ್ದು ತೀರ ಹದ್ದು ಬಸ್ತು ಎರಡು ತಪ್ಪು.
'ಮಕ್ಕಳ ಜೋಡಿ ಮಾತಾಡಬೇಕು' ಬರೇ ರೊಕ್ಕ, ಹೊಲ, ಬಂಗಾರ, ಓದು, ಜೀವನ ಅಲ್ಲ. ಮೊದಲ ಒಳ್ಳೆ ಮನುಷ್ಯ ಆಗ್ರಿ'.
ಅವ್ವ ಅಪ್ಪ ಮಕ್ಕಳ ಜೋಡಿ ಚೊಲೋ ಮಾತಾಡ್ರಿ, ಒಂದು ಕಣ್ಣ ಅಳತಿ ಒಳಗಾ ಅವರನ್ನ ನೋಡ್ರಿ.

ಅಜ್ಜಿ ಸುಮ್ ಸುಮ್ನೆ ಯಾವತ್ತಿಗೂ ಯಾರಿಗೂ ಬೈದೊಳಲ್ಲ, ಒಮ್ಮೆ ಬೈದರೆ ಅಕಟಕಟ..!!

ಸುಮ್ನೆ ಹರಟೆ ಹೊಡಿಯೋರನ್ನ ಕಂಡ್ರೆ ಆಗಲ್ಲ.
"ತಂಗಿದೆರ ಯಾಕ್ ಹೀಂಗ್ ಕುಂತಿರಿ ಏನರೆ ಮಾಡ್ರಿ.?
ಕಾಳು ಹಸನ್ ಮಾಡ್ರಿ, ನಾಕು ಹೊಸ ಚುಕ್ಕಿ (ರಂಗೋಲಿ) ಕಲೀರಿ, ನಾಕು ಪದ ಬಾಯಿಪಾಠ ಮಾಡ್ರಿ, ಇಲ್ಲ ಕೌದಿ ಹೊಲಿರಿ.
ಸುಮ್ಮ ಯಾಕ್ ಕುಂತಿರಿ. ಮಾಡಕ್ಕ ರಗಡ ಕೆಲ್ಸಾ ಅದಾವ್, ಯಾವ್ ಕೆಲ್ಸಾನು ಸಣ್ಣದು ಅಲ್ಲ. ಒಂದೊಂದು ಕೆಲ್ಸಾನು ವಿದ್ಯಾ ಇದ್ದಂಗ.
ಕೂಸಿನ ಕುಂಡಿ ತೊಳಿಯೋದೆ ಇರ್ಲಿ, ಕುಲಾಯಿ ಹೊಲಿಯೋದೆ ಇರ್ಲಿ.
ಅದು ಒಂದು ವಿದ್ಯೆನೆ, ಅದು ಒಂದು ಕೆಲ್ಸಾನೆ.." ಅನ್ನೋಳು.

--

ನಮ್ಮ ಮನೆಯಲ್ಲಿ ಎಲ್ಲ ಗಂಡಸರಿಗು ತಕ್ಕ ಮಟ್ಟಿಗಿನ ಅಡಿಗೆ ಗೊತ್ತು. ಅದಕ್ಕೂ ಅಜ್ಜಿನೆ ಕಾರಣ. ಅದೂ ಒಂದು ವಿದ್ಯೆ.

ಗಂಡಸರಿಗೆ ಅವಳು ಹೇಳಿದ್ದು ಎಷ್ಟೊಂದು, ಮನೆಯಲ್ಲಿ ಹೆಣ್ಣು ಮಕ್ಳು ತಿಂಗಳ ದಿನದಲ್ಲಿದ್ದಾಗ ದೇವರ ಪೂಜೆ ಮಾಡೋ ಹಾಗಿಲ್ಲ.
ಆವಾಗ ಗಂಡಸರೇ ಪೂಜೆ ಮಾಡಬೇಕು, ದೇವರು ತೊಳ್ದು, ಕುಂಕುಮ, ದೀಪ, ಉದಿನ ಕಡ್ಡಿ ಹಚ್ಹ್ಚಾಕ್ ಎಷ್ಟ್ಹೊತ್ತು ಬೇಕು ನಿಮಗ, ಮೊದ್ಲು ಅದು ಕಲೀರಿ.!
ಅವಳ ಪ್ರಕಾರ ಯಾವ ಕೆಲ್ಸಾನು ಚಿಕ್ಕದು ದೊಡ್ಡದು ಅಂತಿಲ್ಲ, ಕೆಲ್ಸಾ ಅಂದ್ರೆ ಒಂದು ವಿದ್ಯೆ.

ನಾನು ಪಿ.ಯು.ಸಿ ಫೇಲ್ ಆಗಿದ್ದೆ. ತುಂಬಾ ದಿನ ಎಲ್ಲಿಯೂ ಹೋಗಿರಲಿಲ್ಲ. ತುಂಬಾ ದಿನಗಳ ನಂತರ ಊರಿಗೆ ಹೋದಾಗ ಅಜ್ಜಿ ಪಕ್ಕ ಕೂಡಿಸಿಕೊಂಡು ಹೇಳಿದಳು,
ಕುಸ; ಕಲಿಲಿಕ್ಕ ಯಾವ ವಯಸ್ಸು ಆದ್ರ ಏನು ಹೀಂಗ ಬ್ಯಾಸರ ಮಾಡ್ಕೊಂಡು ಎಲ್ಲರ ಜೋಡಿ ಮಾತ್ ಬಿಟ್ರ ಹ್ಯಾಂಗ.

ನಿಮ್ಮ ದೊಡ್ಡಪ್ಪ ಗುರುಮೂರ್ತಿ (ಹಿರಿಮಗ) ಗೊಗಾ೦ವ್ (ಅಜ್ಜಿಯ ತವರು) ಕಳ್ಸಿದಾಗ ಅವನ ವಯಸ್ಸು ಎಷ್ಟ ಇತ್ತ ಗೊತ್ತ ನಿನಗ..?
ಬರೋಬರಿ ಹದಿನಾಲ್ಕು..! ಅವಾ ಸಾಲಿಗ ಹೋಗಿ ಓದಕ್ಕ ಶುರು ಮಾಡಿದ್ದು ಆ ವಯಸ್ಸಿನ್ಯಾಗ..!
ಅವ ಏನ್ ಆಗ್ಯಾನ ನಿನಗ ಗೊತ್ತದ..
ನನಗೆ ಆಶ್ಚರ್ಯ...!!
ನನ್ನ ದೊಡ್ಡಪ್ಪ ಓದಿದ್ದು, MA,LLB,IAS.
ಓದಿದ್ದ ನಾಲ್ಕು ಮಕ್ಕಳಲ್ಲಿ ಒಬ್ಬ, ಐ.ಎ.ಎಸ್, ಡಾಕ್ಟರ್, ಸರಕಾರೀ ನೌಕರ, ಮೆಡಿಕಲ್ ಅಂಗಡಿ.

"ಎಂಟು ಮಕ್ಕಳು-ಸೊಸೆಯಂದಿರು, ಇಪ್ಪತ್ತನಾಲ್ಕು ಮೊಮ್ಮಕ್ಕಳು. ಮೂವತ್ತೆಂಟು ಮರಿಮೊಮ್ಮಕ್ಕಳು.."
ಇವತ್ತು ನಾವೆಲ್ಲಾ ಬೇರೆ ಬೇರೆ ಊರಲ್ಲಿ ಇದಿವಿ, ಮನಸ್ಸುಗಳು ಒಂದೇ ಆಗಿವೆ. ಇದಕ್ಕೆಲ್ಲ ಮುಖ್ಯ ಕಾರಣ ಅಜ್ಜಿ.

ಅಜ್ಜ ಹೋಗಿ ಹತ್ತು ವರ್ಷ ಆಯ್ತು, ನಮ್ಮ ಕುಟುಂಬದಲ್ಲಿ ತುಂಬಾ ದುಖದ ವಿಷಯ, ಗುರುಮೂರ್ತಿ ದೊಡ್ಡಪ್ಪನ ಸಾವು.
ಎಂಟು ವರ್ಷದ ಹಿಂದೆ, ಹೃದಯಘಾತದಿಂದ ನಮ್ಮನ್ನೆಲ್ಲ ಅಗಲಿದರು.
ಹದಿನಾಲ್ಕನೇ ವಯಸ್ಸಿಗೆ ಓದಲು ಶುರು ಮಾಡಿ, ಐ.ಎ.ಎಸ್ ಅಧಿಕಾರಿ ಆಗಿ ನಿವ್ರತ್ತರಾದ ಬಳಿಕವು, "ವನರಾಯಿ" ಎಂಬ ಸಂಸ್ತೆಯಲ್ಲಿ ಸೇವೆ ಸಲ್ಲಿಸಿದರು.
'ರಗಡಿತ ಕಣ್ ವಾಳುಚೆ' ಮರಾಠಿಯಲ್ಲಿ ಅವರ ಆತ್ಮಚರಿತ್ರೆ ಇದೆ.

ಓದಿದ್ದು ಮರಾಠಿ ಮಾಧ್ಯಮದಲ್ಲಾದರು ಕನ್ನಡ ಮರೆಯಲಿಲ್ಲ, ಕರ್ನಾಟಕ ಅಂದರೆ ಅವರು ತಪ್ಪದೆ ಹೇಳುತ್ತಿದ್ದು ಇಬ್ಬರ ಹೆಸರು.
'ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗು ಡಾ.ರಾಜಕುಮಾರ್. '
ನಮ್ಮ ಅಜ್ಜಿಗೆ ತುಂಬಾ ನೋವಿನ ಸಂಗತಿ ದೊಡ್ಡಪ್ಪನ ಸಾವು, ಕಣ್ಣ ಮುಂದ ಮಗ ಸತ್ತ ಅನ್ನೋದು.

ಬದುಕಿದ್ದಿದ್ದರೆ ದೊಡ್ಡಪ್ಪನಿಗೆ ೭೭ ವಯಸ್ಸು ಆಗಿರ್ತಿತ್ತು. ಅಜ್ಜಿಗೆ ತೊಂಬತ್ತು ದಾಟಿ ಎಷ್ತಾಯ್ತೋ ಗೊತ್ತಿಲ್ಲ.
ಸ್ವಲ್ಪ ಕಣ್ಣು ಮಂಜಾಗಿದೆ, ಕಿವಿ ಸ್ವಲ್ಪ ಮಂದವಾಗಿದೆ, ಅಷ್ಟೇ. ಅವಳು ಇನ್ನು ಬಲು ಗಟ್ಟಿ.
ನನಗೆ, ನಮ್ಮ ಈಡಿ ಕುಟುಂಬಕ್ಕೆ ಅವಳು ಮಾಡಿದ್ದು ತುಂಬಾ ಇದೆ.
ಹೆಣ್ಣು ಅಂದಾಗ, ನನ್ನ ಅಜ್ಜಿ ನನಗೆ ಆದರ್ಶ. ನಮ್ಮ ಕುಟುಂಬಕ್ಕೂ.
ನನ್ನ ಅಜ್ಜಿ ಸಾತವ್ವ. ಅಜ್ಜಿ ಅಂದ್ರೆ ನನಗೆ ತುಂಬಾ ಇಷ್ಟ..
ಅವಳಿಗೆ ನನ್ನ ಅನಂತ ನಮನಗಳು.

ಮಹಿಳಾ ದಿನಾಚರಣೆಯ ಶುಭಾಶಯಗಳು.
*****

-ಅನಿಲ್ ಬೇಡಗೆ

Mar 9, 2011

"ಕಟ್ಟ ಕಡೆಯ ಅಲೆ"

ಮೊಣಕಾಲಿನವರೆಗೆ ಪ್ಯಾಂಟು ಮಡಿಚಿ
ಈ ಕಿನಾರೆಯುದ್ದಕ್ಕೂ ನಡೆಯುತ್ತಿದ್ದೆವು

ಕಟ್ಟ ಕಡೆ ಅಲೆಗಳಲ್ಲಿ ಅವಳಿರುತ್ತಿದ್ದಳು
ಅವಳ ಕೈಹಿಡಿದು ನಾನು ಒಣ ಮರಳಲ್ಲಿ ನಡೆಯುತ್ತಿದ್ದೆ;
ಉಳಿಯುತ್ತಿದ್ದವು ನನ್ನ ಒಂಟಿ ಹೆಜ್ಜೆಗಳು
**
ಅಲೆಗಳು ಸೂಚನೆ ಕೊಟ್ಟಿದ್ದವು ಮೊದಲು
ನನ್ನೋಳಗಾಗ : ತಣ್ಣಗಿರಲಿ ನನ್ನವಳ ಅಂಗಾಲು


ಅದೇ ಕಿನಾರೆಯಲ್ಲಿ ನಾನೊಬ್ಬನೇ ನಡೆದು ಬಂದೆ
ಈಗಲೂ ನನ್ನ ಒಂಟಿ ಹೆಜ್ಜೆಗಳು
**
ಕಡೆಯ ಅಲೆಗಳಲ್ಲಿ ಕಾಲಿಳಿಬಿಟ್ಟು,
ಖಾಲಿ ನೀಲಿ ನೋಡುತ್ತಾ ಮಲಗಿರುವೆ
ನನ್ನ ಪಾದದ ಬಿಸಿಗೆ ಅದೆಷ್ಟೋ ಮರಳ ಹರಳುಗಳು ಒಣಗುತಿವೆ

ಅವಳು ಜೋತೆಗಿದ್ದಾಗಿನಂತೆ,
ಈಗಲೂ ಮನೆಗೆ ಹೋಗಬೇಕು !
ನನ್ನ ಅಪ್ಪಿಕೊಳ್ಳಲು ಬರುತ್ತಲಿದೆ ರಾತ್ರಿ
ಅವಳಿಗಿಂದು ಮೊದಲರಾತ್ರಿ

ಅದೆಲ್ಲಿಯದೋ ಗಟ್ಟಿಮೇಳ, ಶಹನಾಯಿ ಸದ್ದು
ಇನ್ನೂ ಕೇಳುತ್ತಲೇಯಿದೆ
ಸುಮ್ಮನೆ ಬೆಚ್ಚನೆಯ ಕಣ್ಣೀರು ಜಾರುತಿದೆ

=====
=====

Mar 2, 2011

"ಮುಪ್ಪರಿಯದ ಅಭಿಸಾರಿಕೆ-ರಾಧೆ"

ಕಾದಿರುವಳು ರಾಧೆ
ನೆನಪಿನಲೆಗಳ ಮುಂದೆ
ತನ್ನ ತಾ ಮರೆತು, ಒಂದಾಗುತಿಹಳು
ಸಂಜೆಗೆಂಪಿನೊಳಗೆ

ತುಸು ಬೇಗನೆ ಬಂದಿಲ್ಲಿ ದಾರಿ ನೋಡುವಳು
ಅವನು 'ಏಕಿಷ್ಟು ಬೇಗನೆ ಬರುವೆಯೆಂದರೆ'
ಇವಳದು ಅದೇ ರಾಗ:

'ಕಾಯಿಸುವವನಿಗೇನು ಗೊತ್ತು
ಕಾಯುವ ಸುಖ'
**
ಹತ್ತಿರ ಹತ್ತಿರ ಇನ್ನೂ ಹತ್ತಿರ ಬರುವನು
ಗೋಧೂಳಿಯ ಘಮದ ಸುಮ.
ಅವನ ಮೀಸೆಯಂಚಲ್ಲಿ ಧೂಳು ಧೂಳು ಪರಾಗ !
ಪ್ರತಿಸಂಜೆ ರಾಧೆಯಲ್ಲಿ ಹೊಸ ಪುಳಕ

ಬಂದ ಗೊಲ್ಲ, ಇವಳ ಗಲ್ಲ ತಟ್ಟಿ,
ಉತ್ತರ ಗೊತ್ತಿದ್ದರೂ ಕೇಳುವ: 'ತುಂಬಾ ಹೊತ್ತಾಯಿತಾ?'
ಅಲೆಗಳಾಗ ಶಾಂತ ಶಾಂತ
ಮೆಲ್ಲಗೆ ಅವನ ನೋಡುವಳು-
ರಾಧೆಯ ಬೆರಗುಗಣ್ಣಿನಲ್ಲಿ ಸುಕೋಮಲ ಕೋಪ, ಕೋಪಶಮನ, ಉರಿ !
**
ಕಾದು ಕಾದು
ಎಲ್ಲವನು ತೋರಿ
ತಾನೇ ಕಾಣದಾಗುವಳು-ರಾಧೆ.
ಮತ್ತೆ ಮತ್ತೆ ಕಾಯುವಳು
ಅಲೆಗಳಾ ಮುಂದೆ !

ರಾಧೆ ರಾಧೆ ಎಲ್ಲರಲೂ ಹರಿವ ಸುಧೆ
ಅವಳು, ಅವಳ ಅಭಿಸಾರ- ನಿರಂತರ . . . .


=====
=====